ಪೆಟ್ರೋಲ್‌ ದರ ಏರಿಕೆಯ ಬೆನ್ನಲ್ಲೇ ರಾಜ್ಯದ ಜನತೆಗೆ ಕರೆಂಟ್ ಶಾಕ್‌

ಬೆಂಗಳೂರು, ಜೂ. 09; ಕೊರೋನಾ ಲಾಕ್​ಡೌನ್​ನಿಂದಾಗಿ ಒಂದೆಡೆ ಜನ ಆದಾಯ ಇಲ್ಲದೆ ಬಸವಳಿದಿದ್ದರೆ, ಮತ್ತೊಂದೆಡೆ ಪೆಟ್ರೋಲ್ ಬೆಲೆ ಏರಿಕೆ ದೆಸೆಯಿಂದ ದಿನೋಪಯೋಗಿ ವಸ್ತುಗಳ ಬೆಲೆಯೂ ಗಗನಕ್ಕೆ ಏರುತ್ತಿದ್ದು, ಸಾರ್ವಜನಿಕರು ಪ್ರತಿನಿತ್ಯ ಬದುಕುವುದೇ ದುಸ್ಥರವಾಗಿದೆ. ಈ ನಡುವೆ ರಾಜ್ಯ ಸರ್ಕಾರ ಇಂದು ವಿದ್ಯುತ್​ ಬೆಲೆಯನ್ನು ಮತ್ತೆ ಏರಿಸುವ ಮೂಲಕ ಜನರಿಗೆ ಶಾಕ್ ನೀಡಿದೆ. ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ನಡುವೆಯೇ ವಿದ್ಯುತ್​ ಬೆಲೆಯೂ ಇಂದು ದಾಖಲೆ ಬರೆದಿದ್ದು, ರಾಜ್ಯ ಸರ್ಕಾರ ಯೂನಿಟ್ ಗೆ 30 ಪೈಸೆ ಹೆಚ್ಚಳ‌ ಮಾಡಿ ಆದೇಶಿಸಿದೆ. ಕೆಪಿಟಿಸಿಎಲ್- ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ನೂತನ ದರ ಎಪ್ರಿಲ್.1  2021 ರಿಂದಲೇ ಜಾರಿಯಾಗಲಿದೆ ಎನ್ನಲಾಗುತ್ತಿದೆ.

ಅಸಲಿಗೆ ಬೆಸ್ಕಾಂ ಸೇರಿ 5 ನಿಗಮಗಳಿಂದ ಪ್ರತಿ ಯೂನಿಟ್ ಗೆ 135 ಪೈಸೆ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿತ್ತು. ಈ ಪ್ರಸ್ತಾವನೆ ಆಧರಿಸಿ ಕೆಪಿಟಿಸಿಎಲ್​ನಿಂದ ದರ ಹೆಚ್ಚಳ ಮಾಡಲಾಗುತ್ತದೆ ಎಂದು ಈ ಹಿಂದೆ ಹೇಳಲಾಗಿತ್ತು. ಆದರೆ, ಇಂದು ಸಚಿವ ಸಂಪುಟ ಸಭೆ ನಡೆಸಿ ವಿದ್ಯುತ್ ದರ ಏರಿಕೆ ಬಗ್ಗೆ ಸಿಎಂ ಯಡಿಯೂರಪ್ಪ ಚರ್ಚೆ ನಡೆಸಿದ್ದು, ಯೂನಿಟ್​ಗೆ 30 ಪೈಸೆ ಏರಿಕೆ ಮಾಡಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಸಿದ್ದರಾಮಯ್ಯ ಕಿಡಿ:ವಿದ್ಯುತ್​ ದರ ಏರಿಕೆ ಮಾಡಿರುವ ರಾಜ್ಯ ಸರ್ಕಾರದ ನಿರ್ಧಾರದ ವಿರುದ್ದ ಟ್ವೀಟ್ ಮೂಲಕ ಕಿಡಿಕಾರಿರುವ ಮಾಜಿ ಸಿಎಂ ಸಿದ್ದರಾಮಯ್ಯ, “ಮುಖ್ಯಮಂತ್ರಿಗಳು ವಿದ್ಯುತ್ ದರ ಏರಿಕೆ ನಿರ್ಧಾರ ಮಾಡಿರುವುದು ಪ್ರತಿಯೊಬ್ಬರ ಪಾಲಿಗೂ ದುರಂತ. ಲಾಕ್​ಡೌನ್​ನಿಂದಾಗಿ ಸಾಮಾನ್ಯ ಜನರು, ಕೈಗಾರಿಕೆಗಳು ಪ್ರತಿಯೊಬ್ಬರೂ ಸಹ ಕೋವಿಡ್ ನಿಂದ ಬಸವಳಿದಿದ್ದಾರೆ. ಇಂತಹ ಸಂಧರ್ಭದಲ್ಲಿ ವಿದ್ಯುತ್ ದರ ಏರಿಕೆ ಜನರ ತೊಂದರೆ ಆಗಲಿದೆ” ಎಂದು ಕಿಡಿಕಾರಿದ್ದಾರೆ.

Exit mobile version