ಚಾಮರಾಜನಗರ, ಮಾ. 15: ಸಫಾರಿಗೆ ಹೋದ ಪ್ರವಾಸಿಗರ ಜೀಪನ್ನು ಎರಡು ಕಾಡಾನೆಗಳು ಹಿಂಬದಿ ಹಾಗೂ ಮುಂಬದಿಯಿಂದ ಅಟ್ಟಾಡಿಸಿರುವ ಘಟನೆ ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತ ಪ್ರದೇಶದ ಕೆ. ಗುಡಿಯಲ್ಲಿ ನಡೆದಿದೆ.
ಭತ್ತದಗದ್ದೆ ಕೆರೆ ಎಂಬ ರಸ್ತೆಯಲ್ಲಿ ಸಫಾರಿ ಜೀಪ್ ಕಂಡ ಆನೆಯೊಂದು ದಾಳಿ ಮಾಡಲು ಅಟ್ಟಾಡಿಸಿಕೊಂಡು ಬಂದಿದೆ. ಇದೇ ವೇಳೆ, ಮುಂದಿನಿಂದಲೂ ಬಂದ ಮತ್ತೊಂದು ಸಲಗ ಅಡ್ಡಹಾಕಿ ಪ್ರವಾಸಿಗರನ್ನು ಬೆಚ್ಚಿ ಬೀಳಿಸಿದೆ. ಜೀಪ್ ಚಾಲಕನ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದೆ.
ಈ ಕುರಿತು, ಪ್ರತಿಕ್ರಿಯೆ ನೀಡಿರುವ ಕೆ.ಗುಡಿ ಆರ್ಎಫ್ಒ ಶಾಂತಪ್ಪ ಪೂಜಾರ್ ಪ್ರತಿಕ್ರಿಯಿಸಿ, ಘಟನೆ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ. ಆದರೆ, ಭತ್ತದಗದ್ದೆ ಕೆರೆ ರಸ್ತೆಯಲ್ಲಿ 9 ಆನೆಗಳ ಗುಂಪಿದೆ ಎಂದರು. ಸಾಮಾನ್ಯವಾಗಿ ಒಂದು ಆನೆ ಅಟ್ಟಾಡಿಸಿಕೊಂಡು ಬರುವುದು ಸಹಜ. ಆದರೆ, ಎರಡೆರಡು ಸಲಗಗಳು ಸಫಾರಿ ವಾಹನ ಅಡ್ಡಗಟ್ಟಿದ ಘಟನೆಗಳು ತೀರಾ ಅಪರೂಪ ಎಂದರು.