ಸರ್ಕಾರದ ವಿರುದ್ಧ ಸಾರಿಗೆ ನೌಕರರ ಅಸಮಾಧಾನ: ಫೆ.10ರಿಂದ ಮತ್ತೊಮ್ಮೆ ಮುಷ್ಕರ ನಡೆಸಲು ತೀರ್ಮಾನ

ಬೆಂಗಳೂರು, ಫೆ. 08: ಸರ್ಕಾರದ ಭರವಸೆ ಹಿನ್ನೆಲೆಯಲ್ಲಿ ತಮ್ಮ ಹೋರಾಟ ಕೈಬಿಟ್ಟಿದ್ದ ಸಾರಿಗೆ ನೌಕರರು ಇದೀಗ ಮತ್ತೊಮ್ಮೆ ಮುಷ್ಕರ ನಡೆಸಲು ಸಜ್ಜಾಗಿದ್ದಾರೆ. ತಮ್ಮ ಬೇಡಿಕೆ ಈಡೇರದ ಕಾರಣ ಕೆಎಸ್ಆರ್ ಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮದ ನೌಕರರು ಬುಧವಾರ ಮತ್ತೆ ಮುಷ್ಕರ ಆರಂಭಿಸಲಿದ್ದಾರೆ.

ಕಳೆದ ಬಾರಿ ನಡೆಸಿದ ಮುಷ್ಕರದ ವೇಳೆ ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವುದನ್ನು ಬಿಟ್ಟು ಉಳಿದೆಲ್ಲಾ ಬೇಡಿಕೆ ಈಡೇರಿಸುತ್ತೇವೆ ಎಂದು ಸ್ವತಃ ಸಾರಿಗೆ ಸಚಿವ ಲಕ್ಷ್ಮಣ ಸವದಿ ಲಿಖಿತ ಭರವಸೆ ನೀಡಿದ್ದರು. ಆದರೆ ಈವರೆಗೂ ನಮ್ಮ ಬೇಡಿಕೆ ಈಡೇರಿಲ್ಲ. ಈ ಕೂಡಲೇ ಸರ್ಕಾರ ಮಾತು ಕೊಟ್ಟಂತೆ ನಡೆದುಕೊಳ್ಳಬೇಕು. ಇಲ್ಲದಿದ್ದರೆ ಈ ಮೊದಲು ನಡೆಸಿದ ಹೋರಾಟಕ್ಕಿಂತ ತೀವ್ರ ರೀತಿಯ ಹೋರಾಟ ರೂಪಿಸಬೇಕಾಗುತ್ತದೆ ಎಂದು ಸಾರಿಗೆ ನೌಕರರು ಸರ್ಕಾರವನ್ನು ಆಗ್ರಹಿಸಿದ್ದಾರೆ.

ನಿಗದಿಯಂತೆ ಸಾರಿಗೆ ನೌಕರರು ಮುಷ್ಕರ ನಡೆಸಿದ್ದೇ ಆದಲ್ಲಿ ಸಾರ್ವಜನಿಕರು ಮತ್ತೊಮ್ಮೆ ತೊಂದರೆ ಅನುಭವಿಸಬೇಕಾಗುತ್ತದೆ. ಪ್ರಮುಖವಾಗಿ ಹೊರ ಊರು ಮತ್ತು ರಾಜ್ಯಗಳಿಗೆ ಹೋಗುವ ಜನರು ಬುಧವಾರ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು. ಇಲ್ಲವೆಂದರೆ ಬಸ್ ಗಳಿಲ್ಲದೆ ಪರದಾಡಬೇಕಾಗುತ್ತದೆ.

Exit mobile version