Bengaluru: ಸಿಟಿ ಟ್ಯಾಕ್ಸಿಗಳು (City Taxi) ಮತ್ತು ಆ್ಯಪ್ ಆಧಾರಿತ ಟ್ಯಾಕ್ಸಿಗಳು ಹವಮಾನದ ವ್ಯತ್ಯಾಸ ಮತ್ತು ಜನದಟ್ಟಣೆಗೆ ಅನುಗುಣವಾಗಿ ಪ್ರಯಾಣ ದರ ಏರಿಕೆ ಮಾಡುತ್ತಿರುವುದನ್ನು ತಪ್ಪಿಸಲು ಏಕರೂಪದ ದರ ನಿಗದಿಪಡಿಸಿ ಸರ್ಕಾರ (Karnataka Government) ಅಧಿಸೂಚನೆ ಹೊರಡಿಸಿದೆ. ಈ ನಿಯಮ ಓಲಾ (Ola), ಉಬರ್ (Uber) ಸಹಿತ ಎಲ್ಲ ಟ್ಯಾಕ್ಸಿಗಳಿಗೆ ಅನ್ವಯವಾಗಲಿದೆ.
ಮಳೆ ಬಂದಾಗ ದರ ಹೆಚ್ಚಳ ಮಾಡುವುದು, ಪೀಕ್ ಅವರ್ (Peak hour) ಅಥವಾ ಸಾರ್ವಜನಿಕರು ಕಚೇರಿಗೆ, ಕೆಲಸಕ್ಕೆ ತೆರಳುವ ಮತ್ತು ಮರಳುವ ಸಂದರ್ಭದಲ್ಲಿ ದರ ಹೆಚ್ಚಿಸುವುದು ಮತ್ತು ಜನದಟ್ಟಣೆ ಕಡಿಮೆ ಇರುವ ಸಮಯದಲ್ಲಿ ಟ್ಯಾಕ್ಸಿ ಪ್ರಯಾಣ ದರ ಇಳಿಕೆ ಮಾಡಲಾಗುತ್ತಿತ್ತು. ಈಗಾಗಲೇ ಈ ತಾರತಮ್ಯ ಕುರಿತು ಅನೇಕ ದೂರುಗಳು ಬಂದಿದ್ದವು. ಅದನ್ನು ತಪ್ಪಿಸುವುದಕ್ಕಾಗಿ ಈಗ ಏಕರೂಪ ದರ ನಿಗದಿ ಮಾಡಲಾಗಿದೆ. ಟ್ಯಾಕ್ಸಿ ಹಾಗೂ ಅಗ್ರಿಗೇಟರ್ಸ್ ನಿಯಮದಡಿ (Taxi and Aggregators Rule) ಕಾರ್ಯನಿರ್ವಹಿಸುವ ವಿವಿಧ ಮಾದರಿಯ ಟ್ಯಾಕ್ಸಿಗಳಿಗೆ ಏಕರೂಪ ಪ್ರಯಾಣ ದರ ನಿಗದಿಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಈ ಕೂಡಲೇ ಹೊಸ ನಿಯವನ್ನು ಜಾರಿಗೆ ತರಲು ರಾಜ್ಯ ಸರ್ಕಾರ ಕರ್ನಾಟಕ ರಾಜ್ಯ ಸಾರಿಗೆ ಪ್ರಾಧಿಕಾರಕ್ಕೆ ಮತ್ತು ಪ್ರಾದೇಶಿಕ ಸಾರಿಗೆ ಪ್ರಾಧಿಕಾರಗಳಿಗೆ ನಿರ್ದೇಶಿಸಿದೆ.
ನಿಗದಿಪಡಿಸಿದ ಹೊಸ ದರಗಳು ಹೀಗಿದೆ:
• ವಾಹನದ ಮೌಲ್ಯ 10 ಲಕ್ಷ ರೂ. ಗಿಂತ ಕಡಿಮೆ ಇದ್ದರೆ ಕನಿಷ್ಠ 4 ಕಿಮೀ ವರೆಗೆ ನಿಗದಿತ ದರ 100 ರೂ. ಇರಲಿದೆ. ಪ್ರತಿ ಕಿಮೀಗೆ 24 ರೂ ದರ ನಿಗದಿ ಪಡಿಸಲಾಗಿದೆ.
• ವಾಹನ ಮೌಲ್ಯ 10 ಲಕ್ಷ ದಿಂದ 15 ಲಕ್ಷ ವರೆಗೆ ಇದ್ದರೆ ಕನಿಷ್ಠ 4 ಕಿಮೀ ವರೆಗೆ ನಿಗದಿತ ದರ 115 ರೂ. ಇರಲಿದೆ. ಪ್ರತಿ ಕಿಮೀಗೆ 28 ರೂ. ದರ ನಿಗದಿ ಪಡಿಸಲಾಗಿದೆ.
• ವಾಹನ ಮೌಲ್ಯ 15 ಲಕ್ಷಗಿಂತ ಅಧಿಕವಾಗಿದ್ದರೆ ಕನಿಷ್ಠ 4 ಕಿಮೀ ವರೆಗೆ ನಿಗದಿತ ದರ 130 ರೂ. ಇರಲಿದೆ. ಪ್ರತಿ ಕಿಮೀಗೆ 32 ರೂ. ದರ ನಿಗದಿ ಪಡಿಸಲಾಗಿದೆ.
• ಲಗೇಜ್ (Luggage) ದರಗಳು ಮೊದಲಿನ 120 ಕೆಜಿವರೆಗೆ ಉಚಿತ (ಸೂಟ್ ಕೇಸ್, ಬೆಡ್ಡಿಂಗ್ ಇತ್ಯಾದಿ ವೈಯಕ್ತಿಕ ಲಗೇಜುಗಳು) ನಂತರದ ಪ್ರತಿ 30 ಕೆಜಿಗೆ ಅಥವಾ ಅದರ ಭಾಗಕ್ಕೆ 7 ರೂ.
• ಪ್ರಯಾಣಿಕರ ಕಾಯುವಿಕೆಯ ದರಗಳು ಮೊದಲ 5 ನಿಮಿಷಗಳವರೆಗೆ ಉಚಿತ. ನಂತರದ ಪ್ರತಿ 1 ನಿಮಿಷಕ್ಕೆ 1 ರೂ.
• ರಾತ್ರಿ 12 ಗಂಟೆಯಿಂದ ಬೆಳಗಿನ 6 ಗಂಟೆಯವರೆಗೆ ಸಂಚರಿಸುವ ಟ್ಯಾಕ್ಸಿಗಳಿಗೆ ಪ್ರಯಾಣ ದರದ ಮೇಲೆ ಶೇ.10 ರಷ್ಟು ಹೆಚ್ಚುವರಿ ದರ ನೀಡಬೇಕು.
• ಸಿಟಿ ಟ್ಯಾಕ್ಸಿಯವರು ಅಗ್ರಿಗೇಟರ್ಗಳು ಅನ್ವಯಿಸುವಂತಹ ಜಿ.ಎಸ್.ಟಿ. ಮತ್ತು ಟೋಲ್ (GST And Toll) ಶುಲ್ಕವನ್ನು ಪ್ರಯಾಣಿಕರಿಂದ ವಸೂಲಿ ಮಾಡಬಹುದಾಗಿದೆ. ಇನ್ನು ಮುಂದೆ ಸಮಯದ ಆಧಾರದಲ್ಲಿ ದರಗಳನ್ನು ವಸೂಲಿ ಮಾಡಬಾರದು. ಸರ್ಕಾರದಿಂದ ಕಿಮೀ ಆಧಾರದಲ್ಲಿ ಅಧಿಸೂಚನೆಯಲ್ಲಿ ನಿಗದಿಪಡಿಸಿರುವ ದರಗಳನ್ನು ಮಾತ್ರ ಪ್ರಯಾಣಿಕರಿಂದ ವಸೂಲಿ ಮಾಡಬೇಕು.ಸರ್ಕಾರ ನಿಗದಿಪಡಿಸಿರುವ ದರಗಳನ್ನು ಹೊರತುಪಡಿಸಿ ಅನಧಿಕೃತವಾಗಿ ಯಾವುದೇ ದರಗಳನ್ನು ಪ್ರಯಾಣಿಕರಿಂದ ಪಡೆಯುವಂತಿಲ್ಲ ಎಂದು ಸರ್ಕಾರ ಅಧಿಸೂಚನೆ ಹೊರಡಿಸಿದೆ.