ಲವ್ ಜಿಹಾದ್ ನಿಷೇಧಿಸುವ ಕಾಯ್ದೆ ಶೀಘ್ರದಲ್ಲೇ ಜಾರಿಗೆ – ಸುನೀಲ್ ಕುಮಾರ್

ಬೆಂಗಳೂರು ಡಿ 14 : ಲವ್ ಜಿಹಾದ್ ತಡೆಗಟ್ಟುವ ಕಾನೂನನ್ನು ಕೂಡ ಶೀಘದಲ್ಲೇ ಬಿಜೆಪಿ ಸರ್ಕಾರ ಜಾರಿಗೆ ತರಲಿದೆ  ಎಂದು ಇಂಧನ ಸಚಿವ ವಿ ಸುನೀಲ್ ಕುಮಾರ್ ಸೋಮವಾರ ಹೇಳುವ ಮೂಲಕ ಹೊಸ ಸಂಚನಕ್ಕೆ ನಾಂದಿ ಹಾಡಿದ್ದಾರೆ.

ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಧಾರ್ಮಿಕ ಮತಾಂತರ ನಿಯಂತ್ರಿಸುವ ಮಸೂದೆ ಮಂಡಿಸಲು ಸರ್ಕಾರವು ಸಜ್ಜಾಗಿರುವಾಗಲೇ ಸಚಿವ ಸುನೀಲ್ ಕುಮಾರ್ ಈ ಹೇಳಿಕೆ ಈಗ ಆಶ್ಚರ್ಯ ಹಾಗೂ ಆತಂಕದೊಂದಿಗೆ ಕುತೂಹಲ ಸೃಷ್ಟಿಸಿದೆ.

ಸುವರ್ಣ ಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುನೀಲ್ ಕುಮಾರ್, “ಬಿಜೆಪಿ ಗೋಹತ್ಯೆ ವಿರೋಧಿ ಕಾನೂನು ಜಾರಿಗೆ ತರುವುದಾಗಿ ಘೋಷಿಸಿತ್ತು, ಅದನ್ನು ಮಾಡಿದೆ. ಪ್ರಸಕ್ತ ಅಧಿವೇಶನದಲ್ಲಿ ನಾವು ಮತಾಂತರ ವಿರೋಧಿ ಮಸೂದೆಯನ್ನು ಪರಿಚಯಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ʼಲವ್ ಜಿಹಾದ್ʼ ಅನ್ನು ಸಹ ನಿಷೇಧಿಸುವ ಮಸೂದೆಯನ್ನು ನಮ್ಮ ಸರ್ಕಾರವು ಪರಿಚಯಿಸುತ್ತದೆ,” ಎಂದಿದ್ದಾರೆ.

ಕಳೆದ ವರ್ಷ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗೃಹ ಸಚಿವರಾಗಿದ್ದಾಗ ಅಲಹಾಬಾದ್ ಹೈಕೋರ್ಟ್ ಆದೇಶದ ಆಧಾರದ ಮೇಲೆ ವಿವಾಹದ ಸಲುವಾಗಿ ಧಾರ್ಮಿಕ ಮತಾಂತರದ ವಿರುದ್ಧ ಕಾನೂನು ರೂಪಿಸುವ ಯೋಜನೆಯನ್ನು ಕರ್ನಾಟಕ ಘೋಷಿಸಿತ್ತು. ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಹಿಮಾಚಲ ಪ್ರದೇಶಗಳು ‘ಲವ್ ಜಿಹಾದ್’ಗೂ ಕಡಿವಾಣ ಹಾಕಲು ಕಾನೂನು ರೂಪಿಸಿವೆ ಎಂದು ತಿಳಿಸಿದರು.

Exit mobile version