ಮಾಡದ ತಪ್ಪಿಗಾಗಿ 20 ವರ್ಷ ಜೈಲುವಾಸ ಅನುಭವಿಸಿ, ಈಗ ನಿರಪರಾಧಿ ಎಂದು ಬಿಡುಗಡೆಯಾದ ವಿಷ್ಣು ತಿವಾರಿ!

Vishnu Tiwari

“ನೂರು ಅಪರಾಧಿಗಳು ತಪ್ಪಿಸಿಕೊಂಡರೂ ಪರವಾಗಿಲ್ಲ, ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದು” ಎನ್ನುವ ಮಾತನ್ನು ನೀವು ಕೇಳಿರಬಹುದು.

ಆದರೆ, ಇದಕ್ಕೆ ವಿರುದ್ಧ ಎನ್ನುವಂತೆ, ಮಾಡದ ತಪ್ಪಿಗೆ 20 ವರ್ಷ ಜೈಲು ಶಿಕ್ಷೆ ಅನುಭವಿಸಿ ಬಳಿಕ ನಿರಪರಾಧಿ ಎಂದು ಬಿಡುಗಡೆಯಾಗಿರುವ ವ್ಯಕ್ತಿಯೊಬ್ಬರಿದ್ದಾರೆ. ಇವರ ಹೆಸರು ವಿಷ್ಣು ತಿವಾರಿ, ಈತ ತಾನು ಮಾಡದ ಅತ್ಯಾಚಾರಕ್ಕಾಗಿ 20 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದಾರೆ!

ಈ ಘಟನೆಯ ಹಿನ್ನೆಲೆ ಹೀಗಿದೆ. ಮೂವರು ಸಹೋದರರು, ತುಂಬಿದ ಸಂಸಾರ, ಎಲ್ಲರೂ ಜೊತೆಗಿರುವ ಕೂಡು ಕುಟುಂಬ. ದನ-ಕರುಗಳು, ಬೇಕಾದಷ್ಟು ಜಮೀನು ಇದ್ದಂತಹ ಸಿರಿವಂತ ಕುಟುಂಬ. ಇದರ ಜೊತೆಗೆ ಸೀರೆ ನೇಯುವ ಕಲೆಯೂ ಇವರ ಕುಟುಂಬಕ್ಕೆ ಕರಗತವಾಗಿತ್ತು.

ವಿಷ್ಣು ತಿವಾರಿಯವರು ಇನ್ನೇನು ಮದುವೆಯಾಗ್ಬೇಕು, ತನ್ನ ಸಂಸಾರ ಮಾಡಿಕೊಳ್ಳಬೇಕು, ತಂದೆ ತಾಯಿಯ ಜೊತೆಗೆ ಖುಷಿಯಿಂದ ಇರಬೇಕು. ಇಂತಹ ಹಲವಾರು ಕನಸುಗಳನ್ನು ಕಂಡಿದ್ದ ವಿಷ್ಣು ತಿವಾರಿಗೆ, ತನ್ನ ಕನಸುಗಳು ಕಮರಿ ಹೋಗುತ್ತವೆ ಎಂದು ತಿಳಿದಿರಲಿಲ್ಲ.

ಕೇವಲ ದನ ಕಟ್ಟುವ ವಿಚಾರಕ್ಕೆ ಪಕ್ಕದ ಮನೆಯವರೊಂದಿಗೆ ನಡೆದ ಜಗಳ, ಈ ಯುವಕನ ಬದುಕನ್ನೇ ಕತ್ತಲೆಗೆ ದೂಡಿತ್ತು. ಈ ಗಲಾಟೆಯಲ್ಲಿ ಪರಸ್ಪರ ಕೈ, ಕೈ ಕೂಡಾ ಮಿಲಾಯಿಸಿರಲಿಲ್ಲ, ಆದರೆ ವಿಷ್ಣು ತಿವಾರಿಯ ವಿರುದ್ಧ ಅತ್ಯಾಚಾರದ ಪ್ರಕರಣ ದಾಖಲಾಗುತ್ತದೆ. https://vijayatimes.com/siddaramaiah-slams-state-bjp/

ತಾನು ಮಾಡದ ತಪ್ಪಿಗಾಗಿ ಪಾಪ ವಿಷ್ಣು ಅವರು, ಒಂದಲ್ಲಾ, ಎರಡಲ್ಲಾ ಬರೋಬ್ಬರಿ 20 ವರ್ಷಗಳ ಕಾಲ ಜೈಲುವಾಸ ಅನುಭವಿಸುತ್ತಾರೆ. ಮಾಡದ ತಪ್ಪಿಗೆ ಅತ್ಯಾಚಾರಿ ಎನ್ನುವ ಪಟ್ಟ ಕಟ್ಟಿಕೊಂಡು ಮಗ ಜೈಲು ಸೇರಿದ ಎಂಬ ನೋವಿನಿಂದ ಅಪ್ಪ-ಅಮ್ಮ ಇಹಲೋಕ ತ್ಯಜಿಸುತ್ತಾರೆ.

ಅಷ್ಟು ಮಾತ್ರವಲ್ಲದೇ, ಇಬ್ಬರು ಸಹೋದರರು ಸಾವಿಗೀಡಾದರೆ, ಇನ್ನೊಬ್ಬ ಸಹೋದರ ಮಾನಸಿಕ ಅಸ್ವಸ್ಥನಾಗುತ್ತಾನೆ. ತನ್ನ ಕುಟುಂಬ ಸದಸ್ಯರ ಅಂತ್ಯಕ್ರಿಯೆಗೆ ತೆರಳಲೂ ಕೂಡ ಇವರಿಗೆ ಅವಕಾಶ ಸಿಗಲಿಲ್ಲ.
 ಸದ್ಯ ವಿಷ್ಣು ಅವರು ಮಧ್ಯವಯಸ್ಕನಾಗಿದ್ದು, ಆತನ ಪ್ರಕರಣವನ್ನು ವಿಚಾರಣೆ ನಡೆಸಿದ ಹೈಕೋರ್ಟ್ ವಿಷ್ಣು ತಿವಾರಿಯನ್ನು ನಿರಪರಾಧಿ ಎಂದು ಘೋಷಿಸಿದೆ. ಜೊತೆಗೆ, ಒಬ್ಬ ನಿರಪರಾಧಿ ಇಷ್ಟು ವರ್ಷಗಳ ಕಾಲ ಜೈಲುವಾಸ ಅನುಭವಿಸುವಂತೆ ಮಾಡಿದ್ದಕ್ಕೆ ಪೊಲೀಸ್ ಇಲಾಖೆ ಹಾಗೂ ಸರ್ಕಾರವನ್ನೂ ತರಾಟೆಗೆ ತಗೆದುಕೊಂಡಿದೆ.


ಇಷ್ಟೆಲ್ಲಾ ನಡೆದು ಜೈಲಿನಿಂದ ಬಿಡುಗಡೆಯಾದ ನಂತರ ವಿಷ್ಣು ತಿವಾರಿ, ಇನ್ನಾದರೂ ಜೀವನದಲ್ಲಿ ಸಂತೋಷವಾಗಿರಬೇಕೆಂದು ಮದುವೆಯಾಗುತ್ತಾರೆ. ಆದರೆ ಇವರ ದುರಾದೃಷ್ಟ ನೋಡಿ, ಇವರ ಹೆಂಡತಿ ಮನೆಯಲ್ಲಿದ್ದ ಚಿನ್ನಾಭರಣ, ಹಣ ಎಲ್ಲವನ್ನೂ ಕದ್ದು ಪರಾರಿಯಾಗಿದ್ದಾಳೆ.

ಒಟ್ಟಿನಲ್ಲಿ ದುರಾದೃಷ್ಟ ಎನ್ನುವುದು ಇವರ ಬೆನ್ನಿಗೆ ಬಿದ್ದಂತಿದೆ. ಇಂಥ ಘಟನೆಗಳು ನಿಜಕ್ಕೂ ಶೋಚನೀಯ!
Exit mobile version