ಸಿಡಿ ಧಾರಾವಾಹಿ ಹಿಂದಿನ ಮಹಾನಾಯಕನನ್ನು ನೋಡಲು ಕಾಯುತ್ತಿದ್ದೇನೆ: ಎಚ್‌ಡಿಕೆ ವ್ಯಂಗ್ಯ

ರಾಮನಗರ, ಮಾ. 15: ಸಿಡಿ ಧಾರಾವಾಹಿ ಹಿಂದಿನ ಮಹಾನಾಯಕನನ್ನು ನೋಡಲು ಕುತೂಹಲದಿಂದ ಕಾಯುತ್ತಿದ್ದೇನೆ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ರಾಮನಗರದಲ್ಲಿ ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಇದು ಯಾವುದೋ ಧಾರಾವಾಹಿಯಂತೆ ಇದೆ. ಅಂತಿಮವಾಗಿ ಯಾರಿಗೆ ಸುತ್ತಿಕೊಳ್ಳುತ್ತದೋ ನೋಡಬೇಕು. ಆ ಮಹಾನಾಯಕನ ಬಗ್ಗೆ ತಿಳಿದುಕೊಳ್ಳಲು ನಾನು ಸಹ ಕುತೂಹಲದಿಂದ ಕಾಯುತ್ತಿದ್ದೇನೆ ಎಂದು ತಿಳಿಸಿದರು.

ಸಿಡಿ ವಿಚಾರ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಮ್ಮ ಹೆಸರನ್ನು ತಾವೇ ಸಿಲುಕಿಸಿಕೊಂಡಿದ್ದೇಕೆ ಎಂದು ಗೊತ್ತಾಗಲಿಲ್ಲ. ಈ ಪ್ರಕರಣದಲ್ಲಿ ಅವರ ಹೆಸರನ್ನು ಯಾರಾದರೂ ಹೇಳಿದ್ದಾರಾ? ಅವರೇಕೆ ಹಾಗೆ ಊಹೆ ಮಾಡಿಕೊಂಡರೋ? ರಾಜ್ಯದಲ್ಲಿ ಮಹಾನಾಯಕರು ಬಹಳ ಜನ ಇದ್ದಾರೆ ಎನ್ನುವ ಮೂಲಕ ಡಿ.ಕೆ.ಶಿವಕುಮಾರ್​​ಗೆ ಮಾತಿನಲ್ಲೇ ಚಾಟಿ ಬೀಸಿದರು.

ಈ ಪ್ರಕರಣ ಸಾರ್ವಜನಿಕರಿಗೆ ನಗೆಪಾಟಲಾಗುತ್ತಿದೆ. ಯಾವುದೋ ಲಿಂಕ್ ತೆಗೆದುಕೊಂಡು ಸಾಗುತ್ತಿರುವ ಧಾರಾವಾಹಿ ರೀತಿ ಇದೆ. ನಮ್ಮ ಕುಟುಂಬದಲ್ಲಿ ಇಂತಹ ವಿಷಯಗಳ ಬಗ್ಗೆ ದುರುಪಯೋಗ ಮಾಡಿಕೊಂಡು ರಾಜಕೀಯ ಮಾಡಿಲ್ಲ. ಇದು ಅವರ ವೈಯಕ್ತಿಕ ವಿಚಾರಗಳು, ಜನರ ಸಮಸ್ಯೆಗಳ ಬಗ್ಗೆ ದೊಡ್ಡ ಸವಾಲುಗಳಿವೆ. ಅದರ ಬಗ್ಗೆ ಗಮನ ಕೊಡಬೇಕು. ಈ ರೀತಿಯ ಘಟನೆಗಳಿಂದ ನಾವು ವೈಯಕ್ತಿಕ ಲಾಭ ಪಡೆಯಬೇಕು ಎಂಬ ಸಣ್ಣತನಕ್ಕೆ ನಾವಂತೂ ಇಳಿಯುವುದಿಲ್ಲ ಎಂದರು.

Exit mobile version