ಸಿದ್ದರಾಮಯ್ಯ ಕೊಟ್ಟ 2 ಲಕ್ಷ ಎಸೆದ ಮಹಿಳೆ ; ಹಣ ಬೇಡ, ನ್ಯಾಯ ಬೇಕು ಎಂದು ಆಗ್ರಹ

Siddaramaiah

ಬಾಗಲಕೋಟೆ(Bagalkot) ಜಿಲ್ಲೆಯ, ಬಾದಾಮಿ(Badami) ತಾಲ್ಲೂಕಿನ ಕುಳಗೇರಿ ಕ್ರಾಸ್‍ನಲ್ಲಿದ್ದ ಢಾಬಾದಲ್ಲಿ ನಡೆದಿದ್ದ ಹಲ್ಲೆ ಖಂಡಿಸಿ ಮಹಿಳೆ ಆಕ್ರೋಶ ಹೊರಹಾಕಿದ್ದಾರೆ. ಕುಳಗೇರಿ ಕ್ರಾಸ್‍ನ ಢಾಬಾದ ಮಾಲೀಕರ ಮೇಲೆ ಜುಲೈ 8 ರಂದು ಗಂಭೀರ ಹಲ್ಲೆಯಾಗಿತ್ತು. ಈ ಘಟನೆಯನ್ನು ಹಲ್ಲೆಗೊಳಗಾದ ಕುಟುಂಬಸ್ಥರು ಹಾಗೂ ಸ್ಥಳೀಯರು ಪ್ರಶ್ನಿಸಿ ಪ್ರತಿಭಟನೆ ನಡೆಸಿದ್ದರು. ಇಂದು ಕೆರೂರು ಘರ್ಷಣೆಯ ಗಾಯಾಳುಗಳಿದ್ದ ಆಸ್ಪತ್ರೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಖುದ್ದಾಗಿ ಭೇಟಿ ನೀಡಿ ಸಾಂತ್ವನ ತಿಳಿಸಿದರು.

ಈ ವೇಳೆ ರಜ್ಮಾ ಎಂಬ ಮಹಿಳೆಗೆ ಸಿದ್ದರಾಮಯ್ಯನವರು ಗಾಡಿ ನಿಲ್ಲಿಸಿ, ಮಹಿಳೆಯ ಅಳಲನ್ನು ಕೇಳಿದರು. ಮಹಿಳೆ ರಜ್ಮಾ ಮಾತುಗಳನ್ನು ಕೇಳಿದ ಸಿದ್ದರಾಮಯ್ಯನವರು, 2 ಲಕ್ಷ ರೂ. ನಗದು ಹಣವನ್ನು ಕೈಗೆ ಕೊಟ್ಟು, ಈ ಹಣವನ್ನು ಇಟ್ಟುಕೊಳ್ಳಿ, ಸರ್ಕಾರ ನಿಮಗೆ ಪರಿಹಾರವಾಗಿ ಕೊಡುತ್ತಿಲ್ಲ. ನಾನು ವೈಯಕ್ತಿಕವಾಗಿ ನಿಮಗೆ ಕೊಡುತ್ತಿದ್ದೇನೆ ತೆಗೆದುಕೊಳ್ಳಿ ಎಂದು ಕೊಟ್ಟಿದ್ದಾರೆ. ಹಣ ಕೊಟ್ಟ ಬಳಿಕ ಧೈರ್ಯದ ಮಾತನ್ನು ಹೇಳಿ ಹೊರಟ ಸಿದ್ದರಾಮಯ್ಯನವರ ಕಾರನ್ನು ಹಿಂಬಾಲಿಸಿ, ಅವರು ಕೊಟ್ಟ 2 ಲಕ್ಷ ರೂ. ಹಣವನ್ನು ರಜ್ಮಾ ಎಸೆದಿದ್ದಾರೆ.

ಹಣ ಎಸೆದು, ನಮಗೆ ಹಣ ಬೇಡ, ನ್ಯಾಯ ಬೇಕು! ಹಲ್ಲೆ ಮಾಡಿದ ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಸ್ಥಳದಲ್ಲೇ ನಿಂತು ಆಗ್ರಹಿಸಿದ್ದಾರೆ. ಮಹಿಳೆಯೇ ಈ ನಡೆ ಸರಿಯೇ? ಎಂದು ಕೆಲವರು ಪ್ರಶ್ನಿಸಿದರೇ, ಇನ್ನು ಕೆಲವರು ಇದು ದುರಂಹಕಾರದ ನಡೆ ಎಂದು ಮಹಿಳೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಈ ಕುರಿತು ಪ್ರತಿಕ್ರಿಯೇ ನೀಡಿದ ಸಿದ್ದರಾಮಯ್ಯ, “ನೋಡಿ ನಾವು ಆ ಮಹಿಳೆಗೆ ಹಣ ಕೊಟ್ಟಿದ್ದೇನೆ. ಆದ್ರೆ, ಆ ಮಹಿಳೆ ಅದನ್ನು ಎಸೆದಿದ್ದಾರೆ. ಯಾರೋ ಅವರಿಗೆ ಹೇಳಿಕೊಟ್ಟಿದ್ದಾರೆ, ಉರಿಯೋ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತಿದ್ದಾರೆ.

ಸರ್ಕಾರ ಕೊಡದಿದ್ದರು ನಾನು ಕೊಟ್ಟೆ! ಕೇವಲ ಮಾನವೀಯತೆ ದೃಷ್ಟಿಯಿಂದ ನಾನು ಹಣ ಕೊಟ್ಟು ಸಹಾಯ ಮಾಡಿದೆ” ಎಂದು ಸಿದ್ದರಾಮಯ್ಯನವರು ಹೇಳಿದರು.

Exit mobile version