ಬೆಂಗಳೂರು, ಫೆ. 24: ಗುಜರಾತಿನ ಅಹಮದಾಬಾದಿನಲ್ಲಿ ಬುಧವಾರ ಉದ್ಘಾಟಿಸಲಾದ ವಿಶ್ವದ ಅತಿದೊಡ್ಡ ಕ್ರೀಡಾಂಗಣ ಎಂಬ ಶ್ರೇಯ ಹೊಂದಿರುವ ಕ್ರಿಕೆಟ್ ಕ್ರೀಡಾಂಗಣಕ್ಕೆ ಪ್ರಧಾನಿ ನರೇಂದ್ರ ಮೋದಿ ಹೆಸರು ನಾಮಕರಣ ಮಾಡಿರುವುದನ್ನು ಕೆಪಿಸಿಸಿ ಮಾಜಿ ಅಧ್ಯಕ್ಷ, ಶಾಸಕ ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ದಿನೇಶ್ ಗುಂಡೂರಾವ್,
ಮೊಟೆರಾದಲ್ಲಿರೋ ಕ್ರಿಕೆಟ್ ಕ್ರೀಡಾಂಗಣಕ್ಕೆ ಸರ್ದಾರ್ ವಲ್ಲಭಬಾಯ್ ಪಟೇಲ್ ಬದಲು ನರೇಂದ್ರ ಮೋದಿಯವರ ಹೆಸರು ಮರು ನಾಮಕರಣವಾಗಿದೆ. ಆದರೆ ಮೋದಿ ಅವರು ಪಟೇಲರಂತಹ ಮಹಾತ್ಮರಗಿಂತಲೂ ದೊಡ್ಡವರಾಗಿದ್ದು ಯಾವಾಗ? ಎಂದು ಪ್ರಶ್ನಿಸಿರುವ ಅವರು, ಉಕ್ಕಿನ ಮನುಷ್ಯ ಖ್ಯಾತಿಯ ಪಟೇಲರಿಗೆ ಮಾಡುತ್ತಿರುವ ಅವಮಾನವಲ್ಲವೆ? ಇದು ಪ್ರಧಾನಿಯವರ ಆತ್ಮರತಿಯ ಪರಾಕಾಷ್ಠೆ ಎಂದು ಟೀಕಿಸಿದ್ದಾರೆ.
ಅಲ್ಲದೇ, ಪ್ರಧಾನಿಯೊಬ್ಬರು ತನ್ನದೇ ರಾಜ್ಯದ ಕ್ರೀಡಾಂಗಣಕ್ಕೆ ತನ್ನದೇ ಹೆಸರಿಟ್ಟುಕೊಂಡು, ತನ್ನದೇ ಸರ್ಕಾರದಿಂದ ಉದ್ಘಾಟಿಸಿದ್ದು ಪ್ರಪಂಚದ 8ನೇ ಅದ್ಭುತ. ಇಂತಹ ವಿಚಿತ್ರ ಜಗತ್ತಿನ ಬೇರೆಲ್ಲೂ ನಡೆಯಲು ಸಾಧ್ಯವಿಲ್ಲ. ವ್ಯಕ್ತಿ ಪೂಜೆಯ ವಿರುದ್ಧ ಉದ್ದುದ್ದ ಭಾಷಣ ಮಾಡುವ RSS ನಾಯಕರಿಗೆ ಇದು ವ್ಯಕ್ತಿ ಪೂಜೆಯ ಪರಮಾವಧಿ ಎಂದು ಅನ್ನಿಸುತ್ತಿಲ್ಲವೆ? ಎಂದು ಕಿಡಿಕಾರಿದ್ದಾರೆ.
ಅಹಮದಾಬಾದಿನಲ್ಲಿ ನಡೆದ ಸಮಾರಂಭದಲ್ಲಿ ವಿಶ್ವದ ಅತಿದೊಡ್ಡ ಕ್ರೀಡಾಂಗಣ ಎಂಬ ಶ್ರೇಯ ಹೊಂದಿರುವ ಇಲ್ಲಿಯ ನವೀಕೃತ ಸರ್ದಾರ್ ಪಟೇಲ್ ಕ್ರೀಡಾಂಗಣವನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ಉದ್ಘಾಟಿಸಿದರು. ಅತ್ಯಾಧುನಿಕ ಸೌಲಭ್ಯವುಳ್ಳ ಈ ಕ್ರೀಡಾಂಗಣ 1.32 ಲಕ್ಷ ಪ್ರೇಕ್ಷಕರ ಸಾಮರ್ಥ್ಯ ಹೊಂದಿದೆ.
63 ಎಕರೆ ವಿಸ್ತಾರವುಳ್ಳ ಈ ಕ್ರೀಡಾಂಗಣವನ್ನು ಅಂದಾಜು ₹800 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಆಸ್ಟ್ರೇಲಿಯಾದ ಮೆಲ್ಬರ್ನ್ ಕ್ರಿಕೆಟ್ ಅಂಗಣದ ಆಸನ ಸಾಮರ್ಥ್ಯ 90 ಸಾವಿರ ಆದರೆ ಈ ಕ್ರೀಡಾಂಗಣದ್ದು 1.32 ಲಕ್ಷ. ಕ್ರೀಡಾಂಗಣದ ಒಟ್ಟು ವಿಸ್ತಾರವ 32 ಒಲಿಂಪಿಕ್ ಗಾತ್ರದ ಫುಟ್ಬಾಲ್ ಅಂಗಣಗಳಿಗೆ ಸಮನಾಗಿದೆ.
ಮೆಲ್ಬರ್ನ್ ಕ್ರಿಕೆಟ್ ಅಂಗಣ ವಿನ್ಯಾಸಗೊಳಿಸಿರುವ ಆಸ್ಟ್ರೇಲಿಯಾದ ವಾಸ್ತುಶಿಲ್ಪಿ ಫರ್ಮ್ ಪಾಪ್ಯುಲಸ್ ಅವರ ಕೈಚಳಕವೇ ಅಹಮದಾಬಾದ್ನ ಕ್ರೀಡಾಂಗಣದ ನವೀಕರಣದಲ್ಲಿ ಅಡಗಿದೆ. ಕೆಂಪು ಮತ್ತು ಕಪ್ಪು ಎರಡೂ ಮಣ್ಣಿನಿಂದ ಸಿದ್ಧಪಡಿಸಲಾಗಿರುವ 11 ಪಿಚ್ಗಳು ಈ ಕ್ರೀಡಾಂಗಣದ ವಿಶೇಷವಾಗಿದೆ.