ಉತ್ತರ ಪ್ರದೇಶದ(UttarPradesh), ಹತ್ರಾಸ್(Hathras) ಜಿಲ್ಲೆಯಲ್ಲಿ ಶನಿವಾರ ಹತ್ರಾಸ್ ಆಗ್ರಾ ರಸ್ತೆಯ ಬಧರ್ ಗ್ರಾಮದ ಬಳಿ ವೇಗವಾಗಿ ಬಂದ ಟ್ರಕ್ ಚಾಲಕ ಕನ್ವರ್ ಯಾತ್ರಿಗಳ ಗುಂಪಿನ ಮೇಲೆ ಟ್ರಕ್ ಹತ್ತಿಸಿದ ಪರಿಣಾಮ ಐವರು ಕನ್ವರ್ ಭಕ್ತರು(Kanwar Devotees) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಪಘಾತದಲ್ಲಿ ಸಾವನ್ನಪ್ಪಿದ 5 ಕನ್ವರ್ ಯಾತ್ರಿಗಳು ಮಧ್ಯಪ್ರದೇಶದ(MadhyaPradesh) ಗ್ವಾಲಿಯರ್ಗೆ(Gwalior) ಸೇರಿದವರು ಎಂಬುದು ವರದಿಯಲ್ಲಿ ಉಲ್ಲೇಖವಾಗಿದೆ. ಶನಿವಾರ ಮುಂಜಾನೆ 2.15 ರ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ 93ರ ಹತ್ರಾಸ್ನ ಸದಾಬಾದ್ ಪಿಎಸ್ನಲ್ಲಿ ಈ ಘಟನೆ ಸಂಭವಿಸಿದೆ. ಕನ್ವರ್ ಭಕ್ತರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಗಾಯಗೊಂಡ ಇಬ್ಬರನ್ನು ಆಗ್ರಾ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ.
ಕನ್ವರ್ ಯಾತ್ರಿಗಳ ಗುಂಪು ಹರಿದ್ವಾರದಿಂದ ಗ್ವಾಲಿಯರ್ಗೆ ಹಿಂತಿರುಗುತ್ತಿತ್ತು ಎಂದು ಹೇಳಲಾಗಿದೆ. ಆಗ್ರಾ ವಲಯದ ಎಡಿಜಿ ರಾಜೀವ್ ಕೃಷ್ಣ ಸುದ್ದಿಗಾರರೊಂದಿಗೆ ಮಾತನಾಡಿ, “ಇಂದು ಮುಂಜಾನೆ 2.15ರ ಸುಮಾರಿಗೆ ಹತ್ರಾಸ್ನ, ಸದಾಬಾದ್ ಪಿಎಸ್ನಲ್ಲಿ ಏಳು ಕನ್ವರ್ ಭಕ್ತರ ಮೇಲೆ ಟ್ರಕ್ ಹರಿದ ಪರಿಣಾಮ 5 ಮಂದಿ ಸಾವನ್ನಪ್ಪಿದ್ದಾರೆ, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರು ತಮ್ಮ ಯಾತ್ರೆಯನ್ನು ಮುಗಿಸಿ ಹರಿದ್ವಾರದಿಂದ ಗ್ವಾಲಿಯರ್ಗೆ ಹೋಗುತ್ತಿದ್ದರು. ಈ ಮಧ್ಯೆ ಇಂಥ ದುರ್ಘಟನೆ ಸಂಭವಿಸಿದೆ.
ಪೊಲೀಸರು ಈ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. ಘಟನೆ ಕುರಿತು ತನಿಖೆ ನಡೆಯುತ್ತಿದೆ. ಚಾಲಕನ ಬಗ್ಗೆ ನಮಗೆ ಮಾಹಿತಿ ಸಿಕ್ಕಿದ್ದು, ಶೀಘ್ರದಲ್ಲೇ ಆತನನ್ನು ಬಂಧಿಸಲಾಗುವುದು” ಎಂದು ರಾಜೀವ್ ಕೃಷ್ಣ ಮಾಹಿತಿ ನೀಡಿದ್ದಾರೆ.