ಚೆನ್ನೈ, ಏ. 07: ತಮಿಳುನಾಡು ವಿಧಾನಸಭೆ ಚುನಾವಣೆಗೆ ಮತದಾನ ಮಾಡಲು ತಮಿಳು ನಟ ವಿಜಯ್ ಸೈಕಲ್ನಲ್ಲಿ ಮತಗಟ್ಟೆಗೆ ಆಗಮಿಸಿದ್ದರು. ಚೆನ್ನೈನ ರಸ್ತೆಯಲ್ಲಿ ಸೈಕಲ್ ತುಳಿಯುತ್ತಾ ವಿಜಯ್ ಬರುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಸೈಕಲ್ನಲ್ಲಿ ಬರುತ್ತಿರುವ ವ್ಯಕ್ತಿ ದಳಪತಿ ವಿಜಯ್ ಎಂದು ಜನರಿಗೆ ಗೊತ್ತಾದ ಕೂಡಲೇ ಕೆಲವರು ಹಿಂಬಾಲಿಸಿ ಫೊಟೊ ತೆಗೆಯಲು ಆರಂಭಿಸಿದಾಗ ವಿಜಯ್ ವೇಗವಾಗಿ ಸೈಕಲ್ ತುಳಿದು ಮತಗಟ್ಟೆಗೆ ಬಂದಿದ್ದರು. ಮತಗಟ್ಟೆಗೆ ಬಂದಾಗಲೂ ಅಭಿಮಾನಿಗಳು ಸುತ್ತುವರಿದಿದ್ದು, ಅವರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ಮಾಡಬೇಕಾಗಿ ಬಂದಿತ್ತು.
ಸೈಕಲ್ ತುಳಿದು ವಿಜಯ್ ಮತಗಟ್ಟೆಗೆ ಬಂದಿರುವುದು ಸುದ್ದಿಯಾಗುತ್ತಿದ್ದಂತೆ, ಇಂಧನ ಬೆಲೆ ಏರಿಕೆ ವಿರುದ್ಧ ಪ್ರತಿಭಟಿಸಿ ವಿಜಯ್ ಸೈಕಲ್ ನಲ್ಲಿ ಬಂದಿದ್ದಾರೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಡಿತ್ತು. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಿಜಯ್ ಮೌನವಾಗಿ ಪ್ರತಿಭಟನೆ ತೋರಿದ್ದಾರೆ ಎಂಬ ಪೋಸ್ಟ್ ಗಳು ಫೇಸ್ಬುಕ್, ಟ್ವಿಟರ್ನಲ್ಲಿ ಹರಿದಾಡಿತ್ತು. ಆದರೆ ವಿಜಯ್ ಸೈಕಲ್ ಸವಾರಿ ಹಿಂದೆ ಯಾವುದೇ ಉದ್ದೇಶ ಇರಲಿಲ್ಲ ಎಂದು ಸಾರ್ವಜನಿಕ ಸಂಪರ್ಕಾಧಿಕಾರಿ ಟ್ವೀಟ್ ಮಾಡಿದ್ದಾರೆ.
ವಿಜಯ್ ಮನೆಯ ಪಕ್ಕವೇ ಮತಗಟ್ಟೆ ಇತ್ತು. ಕಿರಿದಾದ ರಸ್ತೆಯಲ್ಲಿ ಕಾರು ತೆಗೆದುಕೊಂಡು ಹೋಗಿ ವಾಹನ ದಟ್ಟಣೆಯುಂಟು ಮಾಡುವುದನ್ನು ತಪ್ಪಿಸಲು ಅವರು ಕಾರಿನ ಬದಲು ಸೈಕಲ್ನಲ್ಲಿ ಹೋಗಿದ್ದಾರೆ. ಇದರ ಹಿಂದೆ ಬೇರೆ ಯಾವ ಉದ್ದೇಶವೂ ಇಲ್ಲ ಎಂದು ವಿಜಯ್ ಅವರ ಸಾರ್ವಜನಿಕ ಸಂಪರ್ಕಾಧಿಕಾರಿ ರಿಯಾಜ್. ಕೆ. ಅಹಮದ್ ಟ್ವೀಟ್ ಮಾಡಿದ್ದಾರೆ.