ಮತಾಂತರ ಕಾಯ್ದೆ ಜಾರಿಯಾದ್ರೆ ಕ್ರಿಶ್ಚಿಯನ್ನರಿಗೇಕೆ ಭಯ : ಆರಗ ಜ್ಞಾನೇಂದ್ರ!

Araga jnanendra

ರಾಜ್ಯದಲ್ಲಿ ಸುಗ್ರೀವಾಜ್ಞೆ ಮೂಲಕ ಮತಾಂತರ(Caste Conversion) ನಿಷೇಧ ಕಾಯ್ದೆ ಜಾರಿಯಾದರೆ ರಾಜ್ಯದಲ್ಲಿರುವ ಕ್ರಿಶ್ಚಿಯನ್(Christians) ಸಮುದಾಯದವರು ಯಾಕೆ ಭಯ ಬೀಳಬೇಕು.

ಬಲವಂತವಾಗಿ ಮತಾಂತರ ಮಾಡಿದವರನ್ನು ಶಿಕ್ಷಿಸಲು ಕಾಯ್ದೆ ಜಾರಿಗೆ ತರಲಾಗಿದೆ. ಯಾವುದೇ ಸಮುದಾಯದವರು ಭಯ ಬೀಳುವ ಅಗತ್ಯವಿಲ್ಲ ಎಂದು ಗೃಹ ಸಚಿವ(HomeMinister) ಆರಗ ಜ್ಞಾನೇಂದ್ರ(Araga Jnanendra) ಹೇಳಿದ್ದಾರೆ. ಮತಾಂತರ ನಿಷೇಧ ಕಾಯ್ದೆ ಜಾರಿಗೆ ಸುಗ್ರೀವಾಜ್ಞೆ ಹೊರಡಿಸಿರುವ ರಾಜ್ಯ ಸರ್ಕಾರದ ಕ್ರಮದ ವಿರುದ್ದ ಕ್ರಿಶ್ಚಿಯನ್ ಧರ್ಮ ಗುರುಗಳು ರಾಜ್ಯಪಾಲರನ್ನು ಭೇಟಿ ಮಾಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಬಲವಂತವಾಗಿ ಮತಾಂತರ ಮಾಡುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲು ಈ ಕಾಯ್ದೆ ರೂಪಿಸಲಾಗಿದೆ.

ಈ ಕಾಯ್ದೆಯ ಬಗ್ಗೆ ಯಾರಿಗೂ ಆತಂಕ ಬೇಡ. ಕ್ರಿಶ್ಚಿಯನ್ ಮತ್ತು ಮುಸ್ಲಿಮರಿಗೆ ಸಂವಿಧಾನದಲ್ಲಿ ಬದುಕಲು ಅವಕಾಶ ನೀಡಲಾಗಿದೆ. ಅಲ್ಪಸಂಖ್ಯಾತರ ಧಾರ್ಮಿಕ ಹಕ್ಕುಗಳಿಗೆ ಈ ಕಾಯ್ದೆಯಿಂದ ಧಕ್ಕೆಯಾಗುವುದಿಲ್ಲ. ಯಾರ ಹಕ್ಕುಗಳನ್ನು ಈ ಕಾಯ್ದೆಯಿಂದ ಕಸಿದುಕೊಳ್ಳಲು ಸಾಧ್ಯವಿಲ್ಲ. ಬಲವಂತದ ಮತಾಂತರಕ್ಕೆ ಮಾತ್ರ ಶಿಕ್ಷೆ ನೀಡಲು ಈ ಕಾಯ್ದೆ ಜಾರಿಗೆ ತಂದಿದ್ದೇವೆ. ಆದರೆ ಕ್ರಿಶ್ಚಿಯನ್ ಧರ್ಮ ಗುರುಗಳು ಯಾಕೆ ಈ ಕಾಯ್ದೆಯಿಂದ ಭಯಗೊಂಡಿದ್ದಾರೆ ಎಂಬುದು ಗೊತ್ತಿಲ್ಲ. ಕಾಯ್ದೆಯ ಬಗ್ಗೆ ಗೊಂದಲ ಮತ್ತು ತೊಂದರೆ ಇದ್ದರೆ ಹೇಳಲಿ ಎಂದರು.

ಇನ್ನು ಅಲ್ಪಸಂಖ್ಯಾತರ ಆಚರಣೆಗಳಿಗೆ ನಾವು ಯಾವುದೇ ಧಕ್ಕೆ ತಂದಿಲ್ಲ. ಕ್ರಿಶ್ಚಿಯನ್ನರು ಪ್ರಾರ್ಥನೆ ಮಾಡಬಹುದು, ಮುಸ್ಲಿಮರು ನಮಾಜ್ ಮಾಡಬಹುದು. ಆದರೆ ಬಲವಂತದ ಮತಾಂತರ ಮಾಡುವ ಹಾಗಿಲ್ಲ. ಆಮಿಷ ಒಡ್ಡಿ ಮತಾಂತರ ಮಾಡುವವರಿಗೆ ಶಿಕ್ಷೆ ನೀಡಲು ಮತ್ತು ಮತಾಂತರ ಆಗುವವರಿಗೆ ಸರ್ಕಾರಿ ಸವಲತ್ತುಗಳನ್ನು ನಿಲ್ಲಿಸಲು ಈ ಕಾಯ್ದೆಯನ್ನು ಜಾರಿ ಮಾಡಿದ್ಧೇವೆ. ಇನ್ನು ರಾಜ್ಯದಲ್ಲಿ ಆಮಿಷದ ಮೂಲಕ ಮತಾಂತರ ಮಾಡಲಾಗುತ್ತಿದೆ ಎಂದು ಅನೇಕ ದೂರುಗಳು ಬಂದಿದ್ದವು. ಶಾಸಕರ ತಾಯಿಯನ್ನೇ ಮತಾಂತರ ಮಾಡಲಾಗಿತ್ತು.

ಹೀಗಾಗಿ ಈ ಕಾಯ್ದೆಯನ್ನು ಜಾರಿಗೆ ತಂದಿದ್ದೇವೆ. ಈ ಹಿಂದೆ ಸಿದ್ದರಾಮಯ್ಯ ಸರ್ಕಾರ ರೂಪಿಸಿದ್ದ ಕಾಯ್ದೆಯನ್ನೇ ಇಂದು ನಾವು ಜಾರಿಗೆ ತಂದಿದ್ದೇವೆ ಹೊರತು ಬೇರೆ ಕಾಯ್ದೆಯಲ್ಲ ಎಂದು ಕಾಂಗ್ರೆಸ್‍ಗೆ ತಿರುಗೇಟು ನೀಡಿದರು.

Exit mobile version