ರಸ್ತೆಯಲ್ಲಿದ್ದ ಗುಂಡಿ ತಪ್ಪಿಸಲು ಹೋಗಿ ಟಿಪ್ಪರ್ ಹರಿದು ಮಹಿಳೆ ಸಾವು

ಬೆಂಗಳೂರು:  ಅ 8 : ರಸ್ತೆಯಲ್ಲಿದ್ದ ಗುಂಡಿ ತಪ್ಪಿಸಲು ಹೋಗಿ ಮಹಿಳೆಯ ಮೇಲೆ ಟಿಪ್ಪರ್ ಲಾರಿ ಹರಿದು, ಮಹಿಳೆ ಸಾವನ್ನಪ್ಪಿದ ಘಟನೆ ಮಾಗಡಿ ರಸ್ತೆಯ ಚಿಕ್ಕಗೊಲ್ಲರಹಟ್ಟಿ ಬಳಿ ನಡೆದಿದೆ. ಮೊನ್ನೆ ಇದೇ ರಸ್ತೆಯಲ್ಲಿ ಟಿಪ್ಪರ್ ಹರಿದು ಪೊಲೀಸ್ ಪೇದೆಯೊಬ್ಬರು ಮೃತಪಟ್ಟಿದ ಘಟನೆ ಮಾಸುವ ಮುನ್ನವೇ ಈ ದುರ್ಘಟನೆ ನಡೆದಿದೆ.

 ರಸ್ತೆ ಗುಂಡಿಗಳಿಂದ ರಾಜಧಾನಿ ಬೆಂಗಳೂರು ಮಂದಿಗೆ ಇನ್ನೂ ಮುಕ್ತಿ ಸಿಕ್ಕಿಲ್ಲ. ಈ ಮಧ್ಯೆ, ಅಲ್ಲಲ್ಲಿ ಗುಂಡಿಗಳು ಮಾರಕವಾಗಿದ್ದು ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಮೊದಲು ರಸ್ತೆ ಗುಂಡಿಗಳನ್ನು ಮುಚ್ಚಿ ಎಂದು ಖುದ್ದು ಹೈಕೋರ್ಟೇ ಆದೇಶಿಸಿದ್ದರೂ ಬಿಬಿಎಂಪಿ ಎಚ್ಚೆತ್ತಿಲ್ಲ. ತಾಜಾ ಪ್ರಕರಣದಲ್ಲಿ ರಸ್ತೆ ಗುಂಡಿ ತಪ್ಪಿಸಲು ಮಹಿಳೆಯೊಬ್ಬರು ಪ್ರಾಣ ತೆತ್ತಿದ್ದಾರೆ.

ರಸ್ತೆಗುಂಡಿಗೆ ತಪ್ಪಿಸಲು ಪಕ್ಕಕ್ಕೆ ಸರಿದ ದ್ವಿಚಕ್ರ ವಾಹನದಲ್ಲಿ ಚಲಿಸುತ್ತಿದ್ದ ಮಹಿಳೆಯ ಮೇಲೆ ಟಿಪ್ಪರ್ ಲಾರಿ ಹರಿದು, ಮಹಿಳೆ ಸಾವನ್ನಪ್ಪಿದ್ದಾರೆ. ಮಾಗಡಿ ರಸ್ತೆಯ ಚಿಕ್ಕಗೊಲ್ಲರಹಟ್ಟಿ ಬಳಿ ಈ ದುರಂತ ನಡೆದಿದೆ. ಮೊನ್ನೆ ಇದೇ ರಸ್ತೆಯಲ್ಲಿ ಟಿಪ್ಪರ್ ಹರಿದು ಪೊಲೀಸ್ ಪೇದೆಯೊಬ್ಬರು ಮೃತಪಟ್ಟಿದ್ದರು. ಒಂದೇ ಕುಟುಂಬದ ಮೂವರು ಬೈಕ್ ಮೇಲೆ ಬರುತ್ತಿದ್ದರು. ಆ ವೇಳೆ ರಸ್ತೆ ಗುಂಡಿ ಕಂಡು ವಾಹನವನ್ನು ಪಕ್ಕಕ್ಕೆ ತಿರುಗಿಸಿದಾಗ ಟಿಪ್ಪರ್ ಲಾರಿ ಮಹಿಳೆಯ ಮೇಲೆ ಹರಿದು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಬೈಕ್ ನಲ್ಲಿದ್ದ ಇನ್ನಿಬ್ಬರಿಗೂ ಗಂಭೀರ ಗಾಯಗಳಾಗಿವೆ.

Exit mobile version