ನವೆಂಬರ್‌ನಿಂದ ಪೂರ್ಣಾವಧಿ ತರಗತಿಗಳು ಪ್ರಾರಂಭ

ಶಿವಮೊಗ್ಗ ಅ 26 :  ಈ ಬಾರಿ ಪಠ್ಯವನ್ನು ಕಡಿತಗೊಳಿಸುವ ಯಾವುದೇ ಯೋಚನೆ ಸರ್ಕಾರಕ್ಕೆ ಇಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದರು.

ಅವರು ಸೋಮವಾರ ನಗರದ ಮಲವಗೊಪ್ಪ ಸರ್ಕಾರಿ ಶಾಲೆಯಲ್ಲಿ 1-5ನೇ ತರಗತಿ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಪಠ್ಯವನ್ನು ಕಡಿತಗೊಳಿಸುವ ಯಾವುದೇ ಯೋಚನೆ ಇಲಾಖೆಗೆ ಇಲ್ಲ. ಮುಂದಿನ ಪರಿಸ್ಥಿತಿಗೆ ಅನುಗುಣವಾಗಿ ಅಗತ್ಯ ಬದಲಾವಣೆ ಮಾಡಿಕೊಳ್ಳಲಾಗುವುದು ಎಂದರು.

ದಸರಾ ರಜೆ ಕಡಿತಗೊಳಿಸಿರುವುದರಿಂದ ಪಠ್ಯ ಪೂರ್ಣಗೊಳಿಸಲು ಬೇಕಾದ ಕ್ರಮವನ್ನು ಶಿಕ್ತಕರ ಸಹಕಾರದೊಂದಿಗೆ ಈಗಾಗಲೇ ಮಾಡಲಾಗಿದೆ. ಪ್ರಾಥಮಿಕ ಶಿಕ್ಷಕರ ಸಂಘದ ಬೇಡಿಕೆಗಳನ್ನು ಈಡೇರಿಸಲು ಈಗಾಗಲೇ 3 ಸುತ್ತಿನ ಮಾತುಕತೆ ನಡೆದಿದೆ. ಕೆಲವೊಂದು ವಿಚಾರಗಳಲ್ಲಿ ಸ್ವಲ್ಪಮಟ್ಟಿನ ಭಿನ್ನಾಭಿಪ್ರಾಯವಿದ್ದು, ಅದನ್ನು ಕೂಡ ಬಗೆಹರಿಸಲಾಗುವುದು ಎಂದರು.

ತಜ್ಞರ ಸಲಹೆ ಮೇರೆಗೆ ಸರ್ಕಾರ ಎಲ್ಲಾ ಮುಂಜಾಗ್ರತಾ ಕ್ರಮಗಳೊಂದಿಗೆ ಶಾಲೆ ಆರಂಭಿಸಲಾಗಿದೆ. 1 ರಿಂದ 5ನೇ ತರಗತಿ ಪ್ರಾರಂಭಕ್ಕೆ ಪೋಷಕರು ಕಾಯುತ್ತಿದ್ದರು, ಈ ಬಗ್ಗೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ಸಭೆ ನಡೆಸಿ ಶಾಲೆ ಆರಂಭಿಸಲು ನಿರ್ಧರಿಸಿ ಮೊದಲ ಹಂತದಲ್ಲಿ ಅರ್ಧ ದಿನ ಶಾಲೆ ಮುಂದಿನ ತಿಂಗಳಿಂದ ಪೂರ್ತಿ ದಿನ ಶಾಲೆ ನಡೆಸಲು ತೀರ್ಮಾನಿಸಲಾಯಿತು ಎಂದರು.

ಇಂದು ಶಾಲೆಯಲ್ಲಿ ನೋಡಿದರೆ ಪೋಷಕರೇ ಖುಷಿಯಿಂದ ಮಕ್ಕಳನ್ನು ತಂದು ಶಾಲೆಗೆ ಬಿಡುತ್ತಿದ್ದಾರೆ. ಅಯಾ ಶಾಲಾ ಬಡಾವಣೆ ಜನರು ಸಹ ಶಾಲೆ ಆರಂಭಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ. ಅನೇಕ ಕಡೆ ಶಾಲೆ ಆರಂಭ ಹಬ್ಬದ ರೀತಿಯಲ್ಲಿ ನಡೆಯುತ್ತಿದ್ದು, ಇದು ಸಮಾಜ ಶಿಕ್ಷಣಕ್ಕೆ ನೀಡಿರುವ ಆದ್ಯತೆಯನ್ನು ತೋರಿಸುತ್ತದೆ ಎಂದರು.

ರಾಜ್ಯದಲ್ಲಿ 48 ಸಾವಿರ ಶಾಲೆಗಳಿವೆ, ಈ ಪೈಕಿ 28900 ಶಾಲೆಗಳು ವ್ಯವಸ್ಥಿತವಾಗಿವೆ. 7 ಸಾವಿರ ಶಾಲೆಗಳ ದುರಸ್ತಿಯಾಗಬೇಕು. ಇದರಿಂದ ಇಂತಹ ಶಾಲೆಗಳಲ್ಲಿ ಮಕ್ಕಳನ್ನು ಹೊಂದಾಣಿಕೆ ಮಾಡಿಕೊಂಡು 2 ಪಾಳಿಯಲ್ಲಿ ಶಾಲೆ ನಡೆಸಲು ತಿಳಿಸಲಾಗಿದೆ ಎಂದರು

ಇನ್ನೂ ಶಾಲೆಗಳ ಅಭಿವೃದ್ಧಿಗೆ ದತ್ತು ಯೋಜನೆಯನ್ನು ಜಾರಿ ಮಾಡಲಾಗುತ್ತಿದೆ. ಇದಕ್ಕಾಗಿ ಪ್ರತ್ಯೇಕ ಆಪ್ ತರುತ್ತಿದ್ದು ನನ್ನ ಶಾಲೆ ನನ್ನ ಕೊಡುಗೆ ಹೆಸರಿನಲ್ಲಿ ಸಾರ್ವಜನಿಕರು, ದಾನಿಗಳು ಸರ್ಕಾರಿ ಶಾಲೆಗಳ ದತ್ತು ಪಡೆದು ಅವುಗಳ ಅಭಿವೃದ್ಧಿಗೆ ಕೊಡುಗೆ ನೀಡಬಹುದಾಗಿದೆ ಎಂದು ತಿಳಿಸಿದರು ಜೊತೆಗೆ ಮುಂದಿನ ವಾರದಿಂದ 1 ರಿಂದ 5ನೇ ತರಗತಿ ಪೂರ್ಣಪ್ರಮಾಣದಲ್ಲಿ ನಡೆಯಲಿದ್ದು, ಬಿಸಿಯೂಟ ಆರಂಭಿಸಲಾಗುವುದು ಎಂದು ಹೇಳಿದರು

Exit mobile version