ಭ್ರಷ್ಟಾಚಾರದ ವಿರುದ್ದ ಕಠಿಣ ಕ್ರಮ – ಬೊಮ್ಮಾಯಿ

cm

ಬೆಂಗಳೂರು: ನಾವು ಯಾವುದೇ ವಿಧಾನದ ಭ್ರಷ್ಟಾಚಾರವನ್ನು ಸಹಿಸುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.

“ನಮ್ಮ ಸರಕಾರ ಯಾವುದೇ ವಿಧಾನದ ಭ್ರಷ್ಟಾಚಾರವನ್ನು ಸಹಿಸುವುದಿಲ್ಲ. ಹೀಗಾಗಿ ತಪ್ಪಿತಸ್ಥ ವ್ಯಕ್ತಿಗಳನ್ನು ರಕ್ಷಿಸುವ ಮಾತೇ ಇಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಬಿಡಿಎ ಮೇಲೆ ಭ್ರಷ್ಟಾಚಾರ ವಿರೋಧಿ ದಳ(ಎಸಿಬಿ) ನಡೆಸಿದ ದಾಳಿಯ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, “ಎಸಿಬಿ ಬಿಡಿಎ ಕಚೇರಿ ಮೇಲೆ ಇತ್ತೀಚೆಗೆ ದಾಳಿ ನಡೆಸಿದೆ. ಎಸಿಬಿ ನೀಡಿದ ವರದಿಯ ಮೇಲೆ ನಾವು ಕ್ರಮ ಕೈಗೊಳ್ಳುತ್ತೇವೆ. ಸತ್ಯ ಖಂಡಿತವಾಗಿಯೂ ಹೊರಗೆ ಬರುತ್ತದೆ. ಭ್ರಷ್ಟಾಚಾರದಲ್ಲಿ ತೊಡಗಿದ ಯಾರನ್ನೂ ರಕ್ಷಿಸುವ ಮಾತೇ ಇಲ್ಲ” ಎಂದಿದ್ದಾರೆ. ಬಿಡಿಎ ವಿರುದ್ಧ ಸಾರ್ವಜನಿಕರಿಂದ ಯಾವುದೇ ದೂರುಗಳನ್ನು ಸ್ವೀಕರಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

“ಬಿಡಿಎ ಮುಖ್ಯಸ್ಥ ಎಸ್ಆರ್ ವಿಶ್ವನಾಥ್ ಅವರು ಕೂಡ ಈ ಬಗ್ಗೆ ನನ್ನ ಗಮನವನ್ನು ಸೆಳೆದಿದ್ದಾರೆ. ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ದೂರುಗಳ ಬಗ್ಗೆ ತನಿಖೆ ನಡೆಸುವಂತೆ ಸೂಚನೆ ನೀಡಲಾಗಿದೆ. ತಪ್ಪಿತಸ್ಥರು ಯಾರೇ ಆಗಿರಲಿ, ಎಷ್ಟೇ ಪ್ರಭಾವಶಾಲಿಗಳಾಗಿರಲಿ ನಾವು ಕ್ರಮ ಕೈಗೊಳ್ಳುತ್ತೇವೆ. ಜನಸಾಮಾನ್ಯರಿಗೆ ಸೇವೆಯನ್ನು ನೀಡಲು ಬಿಡಿಎ ಪರಿಶುದ್ಧವಾಗಿರಬೇಕು” ಎಂದಿದ್ದಾರೆ.

Exit mobile version