ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಸಮಸ್ಯೆ: ಅಗತ್ಯ ಪ್ರಮಾಣದ ಔಷಧ ಪೂರೈಕೆಗೆ ಮುಂದಾಗಲು ಸರ್ಕಾರಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಸಲಹೆ

ಬೆಂಗಳೂರು, ಮೇ. 17: ಕೋವಿಡ್-19 ಸೋಂಕಿತರಿಗೆ ಅಗತ್ಯವಿರುವ ಆಕ್ಸಿಜನ್ ಸೇರಿದಂತೆ ಸೂಕ್ತ ವೈದ್ಯಕೀಯ ಸೌಲಭ್ಯಗಳ ಕೊರತೆ ಎದುರಿಸುತ್ತಿರುವ ಕರ್ನಾಟಕದಲ್ಲಿ ಇದೀಗ, ಬ್ಲ್ಯಾಕ್ ಫಂಗಸ್(ಕಪ್ಪು ಶಿಲೀಂಧ್ರ) ಸಮಸ್ಯೆಗೆ ಔಷಧಿಯ ಕೊರತೆ ಎದುರಾಗಿರುವ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆಕಂತ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ಕಪ್ಪು ಶಿಲೀಂಧ್ರದ ಸಮಸ್ಯೆಯು ಪಿಡುಗಾಗಿ, ಮಹಾಮಾರಿಯಾಗಿ ಕಾಡುವ ಆತಂಕವನ್ನು ಜನರ ಮುಂದೊಡ್ಡಿದೆ. ಅದರ ಚಿಕಿತ್ಸೆಗೆ ಅಗತ್ಯವಿರುವ Liposomal Amphotericin B ಔಷಧ ಕೊರತೆಯನ್ನು ಕರ್ನಾಟಕ ಎದುರಿಸುತ್ತಿರುವುದು ಬಹಿರಂಗವಾಗಿದೆ. ರಾಜ್ಯದಲ್ಲಿ ಔಷಧದ 1,050 ವಾಯ್ಲ್‌ಗಳು (ಶೀಶೆ) ಮಾತ್ರ ಇವೆ ಎಂಬ ಆಘಾತಕಾರಿ ಅಂಶವು ಭಯ ಸೃಷ್ಟಿಸಿದೆ.

ಕಪ್ಪು ಶಿಲೀಂಧ್ರ ಸಮಸ್ಯೆ ರಾಜ್ಯದಲ್ಲಿ ಈಗಾಗಲೇ ಗಂಭೀರ ಸ್ವರೂಪದಲ್ಲಿ ಕಾಣಿಸಿದ್ದು, ಹಲವರು ಬಲಿಯಾಗಿದ್ದಾರೆ. ಕೋವಿಡ್‌ನಿಂದ ಗುಣವಾಗುವ 400 ಮಂದಿ ಪ್ರತಿ ವಾರ ಈ ಸಮಸ್ಯೆಗೆ ಸಿಲುಕುವ ಸಾಧ್ಯತೆಯನ್ನು ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ಸರ್ಕಾರಕ್ಕೆ ತಿಳಿಸಿದೆ. ಹೀಗಾಗಿ ಎದುರಾಗಿರುವ ಔಷಧ ಕೊರತೆ ದುರಂತದ ಮುನ್ಸೂಚನೆ ನೀಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಅಲ್ಲದೇ, Liposomal Amphotericin B ಔಷಧಿಯ 20,000 ವಯಲ್‌ಗಳನ್ನು ಶೀಘ್ರವೇ ಪೂರೈಕೆ ಮಾಡುವಂತೆ ರಾಜ್ಯ ಔಷಧ ಉಗ್ರಾಣ ಕೇಂದ್ರವು ಕೇಂದ್ರ ಸರ್ಕಾರವನ್ನು ಕೋರಿದೆ. ರಾಜ್ಯ ಸರ್ಕಾರ ಕೂಡಲೇ ಕೇಂದ್ರದ ಮೇಲೆ ಒತ್ತಡ ತಂದು ಅಗತ್ಯ ಪ್ರಮಾಣದ ಔಷಧಗಳನ್ನು ತರಿಸಿಕೊಳ್ಳುವುದರತ್ತ ಗಮನಹರಿಸಬೇಕು. ಇಲ್ಲವಾದಲ್ಲಿ ಮತ್ತೊಂದು ಭೀಕರತೆಗೆ ಜನ ಸಿಲುಕುವ ಅಪಾಯವಿದೆ ಎಂದು ಎಚ್ಚರಿಸಿದ್ದಾರೆ.

ಕಪ್ಪು ಶಿಲೀಂಧ್ರ ಸಮಸ್ಯೆ ಮಹಾರಾಷ್ಟ್ರದಲ್ಲಿ ಹಲವು ತಿಂಗಳ ಮೊದಲೇ ಕಾಣಿಸಿಕೊಂಡಿತ್ತು. ಸಮಸ್ಯೆ ಇಲ್ಲಿಯೂ ಕಾಣಿಸಿಕೊಳ್ಳುವ ಅಪಾಯದ ಬಗ್ಗೆ ತಜ್ಞರು ಹೇಳುತ್ತಲೇ ಬಂದಿದ್ದಾರೆ. ಈ ಸಮಸ್ಯೆ ದೊಡ್ಡದಾಗುವ ಎಚ್ಚರಿಕೆಗಳಿದ್ದರೂ ಔಷಧದ ವ್ಯವಸ್ಥೆ ಮಾಡದಿರುವುದು ಸರ್ಕಾರದ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎಂದು ರಾಜ್ಯ ಸರ್ಕಾರದ‌ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ಔಷಧ ಸಂಗ್ರಹ ಈ ಹೊತ್ತಿನ ಅಗತ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದು ಸಂದಿಗ್ಧ ಕಾಲದ ಸೂಕ್ತ ಸಲಹೆ ಎಂದು ಎಲ್ಲರೂ ಭಾವಿಸಿಕೊಳ್ಳಬೇಕು. ಹಲವು ದಿನಗಳಿಂದ ಸರ್ಕಾರಕ್ಕೆ ನಾನು ನೀಡಿದ ಸಲಹೆಗಳನ್ನು ಕೆಲ ಕಿಡಿಗೇಡಿಗಳು ‘ರಾಜಕೀಯ’ ಎಂದು ಭಾವಿಸಿದ್ದಾರೆ. ಪಿಡುಗೊಂದು ಕಾಡುವಾಗ ‘ಹಿಂದೆಂದೂ ನೋಡಿರದಷ್ಟು ಜನಸ್ತೋಮ’ ಸೇರಿಸಿ ರ‍್ಯಾಲಿ ಮಾಡಿದ್ದು, ಜನರನ್ನು ಕಂಡು ಉದ್ಘಾರಿಸಿದ್ದು ನಾವಲ್ಲ ಎಂಬುದು ಅರಿವಲ್ಲಿರಲಿ ಎಂದು ಕಿಡಿಕಾರಿದ್ದಾರೆ.

Exit mobile version