ಚಿತ್ರ ನಿರ್ಮಾಣ ಹೊರತು ಬೇರಾವುದೇ ವ್ಯವಹಾರವಿಲ್ಲ; ರಾಧಿಕಾ ಕುಮಾರಸ್ವಾಮಿ

ಬೆಂಗಳೂರು, ಜ. 06: ರಾಧಿಕಾ ಕುಮಾರಸ್ವಾಮಿ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದ್ದುಅದರ ಸ್ಪಷ್ಟೀಕರಣ ಮಾಡುವುದಕ್ಕಾಗಿ ರಾಧಿಕಾ ಅವರು ತುರ್ತು ಪತ್ರಿಕಾ ಗೋಷ್ಟಿ ನಡೆಸಿ  ಚಿತ್ರ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಯುವರಾಜ್ ಖಾತೆಯಿಂದ 2020ರ ಮಾರ್ಚ್ ತಿಂಗಳಲ್ಲಿ ನನಗೆ 15 ಲಕ್ಷ ರೂ. ಸಂದಾಯವಾಗಿದೆ. ಮತ್ತು ಅವರ ಭಾವನ ಖಾತೆಯಿಂದ 60 ಲಕ್ಷ ಸೇರಿ ಒಟ್ಟು 75 ಲಕ್ಷ ಹಣ ನನಗೆ ಸಂದಾಯವಾಗಿದೆ, ಎಂದು ನಟಿ ರಾಧಿಕಾ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಇದು ಸಿನೆಮಾಕ್ಕಾಗಿ ನೀಡಲಾಗಿರುವ ಮುಂಗಡ ಸಂಭಾವನೆ ಎಂದು ಹೇಳಿದ್ದಾರೆ.

ಯುವರಾಜ್ ಅವರು ನಮ್ಮ ತಂದೆಯ ಸ್ನೇಹಿತರು. 17 ವರ್ಷದಿಂದಲೂ ನಮ್ಮ ಕುಟುಂಬದ ಜೊತೆ ಸಂಪರ್ಕದಲ್ಲಿದ್ದಾರೆ. 2019ರ ಮೇನಲ್ಲಿ ನಮ್ಮ ತಂದೆ ಮರಣ ಹೊಂದಿದರು. ಆನಂತರ ನಾವು ದೆಹಲಿಯಲ್ಲಿದ್ದಾಗ ಯುವರಾಜ್ ಅವರಿಂದ ಫೋನ್ ಕರೆ ಬಂತು. ನಮ್ಮ ತಂದೆ ತೀರಿಹೋಗಿದ್ದಕ್ಕೆ ವಿಷಾದ ವ್ಯಕ್ತಪಡಿಸಿದ್ದರು. ನಮ್ಮ ತಾಯಿಯವರನ್ನು ಭೇಟಿ ಮಾಡಿ ಸಾಂತ್ವಾನ ಮಾಡುವುದಾಗಿ ಹೇಳಿ ದೆಹಲಿಯಲ್ಲಿ ನಮ್ಮನ್ನು ಭೇಟಿ ಮಾಡಿದರು. ಆನಂತರ ಅವರ ಜೊತೆ ಮಾತುಕತೆಗಳು ಮುಂದುವರೆದವು ಎಂದಿದ್ದಾರೆ.

ಇದಕ್ಕೂ ಮೊದಲು ಯುವರಾಜ್ ಅವರ ಜೊತೆ ನಮ್ಮ ತಂದೆಗೆ ಒಳ್ಳೆಯ ಸ್ನೇಹವಿತ್ತು. ಕುಟುಂಬದ ಜ್ಯೋತಿಷಿ ಎಂದು ಯುವರಾಜ್ ಕೆಲಸ ಮಾಡುತ್ತಿದ್ದರು. ಅವರು ಹೇಳಿದ ಎಲ್ಲ ವಿಷಯಗಳು ನಿಜವಾಗುತ್ತಿತ್ತು. ಹಾಗಾಗಿ ಅವರನ್ನು ನಂಬಿ ಮಾತುಕತೆಗಳಾಡುತ್ತಿದ್ದೆವು.

ನಮ್ಮ ತಂದೆ ತೀರಿದ ಬಳಿಕ ನಡೆದ ಮಾತುಕತೆಗಳಲ್ಲಿ ನಾಟ್ಯ ರಾಣಿ ಶಾಕುಂತಲೆಯ ಐತಿಹಾಸಿಕ ಚಿತ್ರ ನಿರ್ಮಾಣದ ವಿಷಯವೂ ಚರ್ಚೆಗೆ ಬಂದಿತ್ತು. ಮುಂಗಡವಾಗಿ 2020ರ ಮಾರ್ಚ್‍ನಲ್ಲಿ ಯುವರಾಜ್ ಖಾತೆಯಿಂದ ನನಗೆ 15 ಲಕ್ಷ ರೂ.ಗಳನ್ನು ಪಾವತಿಸಿದ್ದರು. ನಂತರ ಅವರ ಭಾವರವರ ಖಾತೆಯಿಂದ 60 ಲಕ್ಷ ರೂ.ಗಳನ್ನು ಹಾಕಿಸಿದ್ದಾರೆ.

ಈ ಹಣಕ್ಕೆ ಸಂಬಂಧಪಟ್ಟಂತೆ ಲೆಕ್ಕಪರಿಶೋಧನೆಯ ವೇಳೆ ದಾಖಲಾತಿಗಳು ಬೇಕಾಗಿತ್ತು. ಹಾಗಾಗಿ ಅಗ್ರಿಮೆಂಟ್‍ಗೆ ಸಹಿ ಹಾಕಿಕೊಡುವಂತೆ ನಾನು ಪದೇ ಪದೇ ಫೋನ್ ಮಾಡಿದ್ದೇನೆ. ಆದರೆ ಅವರು ವೈಯಕ್ತಿಕ ಸಮಸ್ಯೆಗಳನ್ನು ಹೇಳಿಕೊಂಡು ಅಗ್ರಿಮೆಂಟ್‍ಗೆ ಸಹಿ ಮಾಡಿಕೊಟ್ಟಿರಲಿಲ್ಲ.

ನಾನು ಈವರೆಗೂ ಯಾವುದೇ ಸಿನಿಮಾವನ್ನು ಅಗ್ರಿಮೆಂಟ್ ಮಾಡಿಕೊಂಡೇ ಮಾಡಿಲ್ಲ. ಬಾಯಿ ಮಾತಿನಲ್ಲೂ ಕೆಲಸ ಮಾಡಿದ್ದೇನೆ. ಹೀಗಾಗಿ ಯುವರಾಜ್ ವಿಷಯದಲ್ಲೂ ಬಾಯಿ ಮಾತಿನ ಮೇಲೆ ವ್ಯವಹಾರ ಮಾಡಿರುವುದಾಗಿ ತಿಳಿಸಿದರು.

ಯುವರಾಜ್ ಅವರು ವಂಚನೆ, ಮೋಸ ಪ್ರಕರಣಗಳಲ್ಲಿ ಭಾಗವಹಿಸಿದ್ದರೆ ಅದಕ್ಕೆ ನಾನು ಭಾಗಿದಾರಳಲ್ಲ. ನನಗೂ ಅದಕ್ಕೂ ಸಂಬಂಧವಿಲ್ಲ. ನನ್ನ ಮತ್ತು ಅವರ ನಡುವೆ ಚಿತ್ರ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಮಾತ್ರ ಮಾತುಕತೆಯಾಗಿತ್ತು.

 ನಮ್ಮ ಮನೆಯಲ್ಲಿ ವಾಸ್ತು, ಜ್ಯೋತಿಷ್ಯ, ಕೌಟುಂಬಿಕ ವಿಚಾರಗಳ ಬಗ್ಗೆ ಮಾತನಾಡಿದ್ದೇವೆ. ಅದನ್ನು ಹೊರತುಪಡಿಸಿ ಯಾವುದೇ ರಾಜಕಾರಣಿಯಿಂದ ಕೆಲಸ ಮಾಡಿಸಿಕೊಡುವುದಾಗಿ ನಾನು ಭರವಸೆ ಕೊಟ್ಟು ಹಣಕಾಸಿನ ವ್ಯವಹಾರ ಮಾಡಿಲ್ಲ. ಯುವರಾಜ್ ಅವರು ತಪ್ಪು ಮಾಡಿ ನಮ್ಮ ಮೂತಿಗೆ ವರೆಸಿ ಹೋಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹಣಕಾಸಿನ ವ್ಯವಹಾರ ನನ್ನ ಮತ್ತು ಯುವರಾಜ್ ಅವರ ನಡುವೆ ಮಾತ್ರ ನಡೆದಿದೆ. ನಮ್ಮ ಅಣ್ಣನ ಖಾತೆಗೆ ಯುವರಾಜ್ ಅವರಿಂದ ಯಾವುದೇ ಹಣ ಸಂದಾಯವಾಗಿಲ್ಲ. ನನಗೂ ಕೂಡ 75 ಲಕ್ಷ ಮೇಲ್ಪಟ್ಟು ಹಣ ಬಂದಿಲ್ಲ. ನಮ್ಮ ಒಡೆತನದಲ್ಲೂ ಯಾವ ಕಾಲೇಜುಗಳು ಇಲ್ಲ. ಚಿತ್ರ ನಿರ್ಮಾಣ ಹೊರತುಪಡಿಸಿ ಬೇರೆ ಯಾವುದೇ ವ್ಯವಹಾರಗಳು ಇಲ್ಲ ಎಂದು ಹೇಳಿದರು.ನಾನು ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದೇನೆ. ರಾಜಕೀಯದ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಮುಂದಿನ ದಿನಗಳಲ್ಲಿ ಆ ಬಗ್ಗೆ ಪರಿಶೀಲಿಸುವುದಾಗಿ ಹೇಳಿದ್ದೇನೆ. ನಾನು ರಾಜಕೀಯ ವ್ಯಕ್ತಿಗಳನ್ನು ಭೇಟಿ ಮಾಡಿದ್ದೇನೆ. ಆದರೆ ಅವರಿಂದ ಕೆಲಸ ಮಾಡಿಸಿಕೊಡುವುದಾಗಿ ಹೇಳಿ ಮೋಸ, ವಂಚನೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ನನ್ನ ಖಾತೆಗೆ ಬೇಡ ಬೇಡವೆಂದರೂ ಯುವರಾಜ್ ಹಣ ಹಾಕಿದ್ದಾರೆ. ಈಗ ಒಂದೊಂದೆ ಹಗರಣಗಳು ಹೊರಬರುತ್ತಿರುವುದು ನೋಡಿದರೆ ಭಯವಾಗುತ್ತದೆ. ಅವರ ಹಣವನ್ನು ವಾಪಸ್ ಕೊಟ್ಟು ಕೈ ತೊಳೆದುಕೊಳ್ಳುತ್ತೇನೆ ಎಂದು ರಾಧಿಕಾ ಹೇಳಿದ್ದಾರೆ.

Exit mobile version