ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ‌ ಪರೀಕ್ಷೆ ನಡೆಯೋದು ಗ್ಯಾರೆಂಟಿ: ಎರಡು ಪ್ರಶ್ನೆ ಪತ್ರಿಕೆಗಳ ಮೂಲಕ ಎಕ್ಸಾಂ: ಸಚಿವ ಸುರೇಶ್‌ ಕುಮಾರ್

ಬೆಂಗಳೂರು, ಜೂ. 04: ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಈ ಬಾರಿ ಎರಡು ಪರೀಕ್ಷೆ ನಡೆಸಲಾಗುವುದು ಎಂದು ಸಚಿವ ಸುರೇಶ್‌ ಕುಮಾರ್‌ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಕಳೆದ ಬಾರಿ 9ನೇ ತರಗತಿ ಪರೀಕ್ಷೆಯೂ ನಡೆದಿಲ್ಲ. ಅದರ ಆಧಾರದ ಮೇಲೆ ಅಂಕಗಳನ್ನು ನೀಡಲು ಸಾಧ್ಯವಾಗದ ಕಾರಣ, ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ವಿಜ್ಞಾನ, ಗಣಿತ ಮತ್ತು ಸಮಾಜ ವಿಜ್ಞಾನದ ಒಂದು ಪತ್ರಿಕೆ, ಭಾಷೆಗಳಿರುವ ಮತ್ತೊಂದು ಪ್ರಶ್ನೆಪತ್ರಿಕೆ ಇರುತ್ತದೆ ಎಂದು ತಿಳಿಸಿದರು.

ಪರೀಕ್ಷೆಯಲ್ಲಿ ಬಹುಆಯ್ಕೆಯ ಪ್ರಶ್ನೆಗಳಿದ್ದು, ನೇರ ಮತ್ತು ಸರಳವಾಗಿರುತ್ತವೆ. ಪ್ರತಿ ವಿಷಯಕ್ಕೆ 40 ಅಂಕಗಳಿರುತ್ತವೆ. ಅಂದರೆ, ಒಂದು ಪತ್ರಿಕೆ 120 ಅಂಕಗಳಿಗೆ ಇದ್ದು, ಮೂರು ಗಂಟೆ ಸಮಯ ನೀಡಲಾಗುತ್ತದೆ. ವಿದ್ಯಾರ್ಥಿಗಳು ಪಿಯುಸಿಯಲ್ಲಿ ವಿಜ್ಞಾನ, ವಾಣಿಜ್ಯ, ಕಲಾ ವಿಭಾಗ ಸೇರಿದಂತೆ ಯಾವುದೇ ಕೋರ್ಸ್‌ ತೆಗೆದುಕೊಳ್ಳಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ಪರೀಕ್ಷೆ ನಡೆಸಲಾಗುತ್ತಿದೆ. ಯಾರನ್ನೇ ಆಗಲಿ ಅನುತ್ತೀರ್ಣಗೊಳಿಸುವ ಉದ್ದೇಶವಿಲ್ಲ. ಎ, ಎ+ ಗ್ರೇಡ್ ನೀಡಲಾಗುತ್ತದೆ’ ಎಂದರು.

ಕೋವಿಡ್ ಕಾರಣದಿಂದ ಗೈರಾಗಿದ್ದರೆ ಅಂತಹ ಮಕ್ಕಳಿಗೆ ಮಾತ್ರ ಪೂರಕ ಪರೀಕ್ಷೆ ನಡೆಸಲಾಗುತ್ತದೆ’ ಎಂದೂ ತಿಳಿಸಿದರು.

Exit mobile version