ತಾಸುಗಟ್ಟಲೆ ಬೆಳಗುವ “ಪಾಂಡವರ ಬತ್ತಿ ಮರ” : ಈ ಮರಕ್ಕೂ ಪಾಂಡವರಿಗೂ ಏನು ಸಂಬಂಧ? ಇಲ್ಲಿದೆ ಮಾಹಿತಿ

History

ಚಿಕ್ಕವರಿದ್ದಾಗ ಸೀಮೆ ಎಣ್ಣೆ(Kerosene Lamp) ಬತ್ತಿಗಳನ್ನು ಬಳಸಿದ ನೆನಪು ಹಲವರಿಗಿರಬಹುದು. ಆದರೆ ನಮ್ಮ ಪೂರ್ವಜರು ದಿನನಿತ್ಯದ ಬದುಕಿನಲ್ಲಿ ಕೇವಲ ಸೀಮೆಎಣ್ಣೆ ಬತ್ತಿ ಅಥವಾ ಹತ್ತಿ ಬತ್ತಿಯ ಹಣತೆಗಳನ್ನೇ ಆಶ್ರಯಿಸುತ್ತಿರಲಿಲ್ಲ. ಬದಲಾಗಿ ಮರದ ಮೊಗ್ಗುಗಳನ್ನು ಕೂಡಾ ದೀಪದ ಬತ್ತಿಯಾಗಿ ಉಪಯೋಗಿಸುತ್ತಿದ್ದರು. ಇಂತಹ ಒಂದು ಮರದ ಹೆಸರು ಕರಿಕಲುಮರ. ಇದನ್ನು ಕೈಕರಿಕಲು ಮರ ಎಂದು ಕೂಡ ಕರೆಯುತ್ತಾರೆ. ಈ ಕರಿಕಲು ಮರಕ್ಕೆ ಮಹಾಭಾರತದ ವನವಾಸದ ಕಥೆಯೂ ತಳಕು ಹಾಕಿಕೊಂಡಿದೆ.

ಪಾಂಡವರು(Pandavas) ವನವಾಸದಲ್ಲಿದ್ದ ವೇಳೆ ಬುಡಕಟ್ಟು ಮಹಿಳೆಯೊಬ್ಬರಿಂದ ದ್ರೌಪದಿ(Draupadi) ಈ ಮರದ ಮೊಗ್ಗಿನ ಬಗ್ಗೆ ತಿಳಿದುಕೊಂಡಳಂತೆ. ಹಸ್ತಿನಾವತಿಯಿಂದ ತಂದಿದ್ದ ಎಣ್ಣೆಬತ್ತಿಗಳು ಮುಗಿಯುವ ಹಂತಕ್ಕೆ ಬಂದಾಗ ಬುಡಕಟ್ಟು ಜನರು ಉಪಯೋಗಿಸುತ್ತಿದ್ದ ಈ ಮೊಗ್ಗು ನೆನಪಿಗೆ ಬಂದು, ಭೀಮನ ಮೂಲಕ ಕರಿಕಲು ಮರದ ಮೊಗ್ಗುಗಳನ್ನು ತರಿಸಿಕೊಂಡು, ಹಣತೆ ಹೊತ್ತಿಸಿದಳು ಎಂಬ‌ ಮಾತಿದೆ. ಹಾಗಾಗಿ ಕರಿಕಲು ಮರವು “ಪಾಂಡವರ ಬತ್ತಿ ಮರ” ಎಂದು ಪುರಾಣ ಪ್ರಸಿದ್ಧವಾಗಿದೆ. ಈ ಮರ ಹೆಚ್ಚಾಗಿ ಅರಣ್ಯ ಪ್ರದೇಶಗಳಲ್ಲಿ ಕಾಣಸಿಗುತ್ತದೆ. ಅದೇ ರೀತಿ, ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲೂ ಈ ಮರಗಳಿದ್ದು,

ಇದು ತೇಗಿನ ಜಾತಿಗೆ ಸೇರಿದ ಪ್ರಭೇದ ಎನ್ನುತ್ತಾರೆ ಪರಿಸರ ತಜ್ಞರು. ಈ ಕರಿಕಲು ಮರದ ಮೊಗ್ಗುಗಳು ಎಷ್ಟು ಬೆಳಕು ನೀಡುತ್ತವೆಯೋ, ಇವುಗಳಲ್ಲರಳುವ ಹೂಗಳು ಕೂಡ ಅಷ್ಟೇ ಸುವಾಸನೆ ಭರಿತವಾಗಿವೆ. ಈ ಮರದಲ್ಲರಳುವ ಹೂವಿನ ಮೊಗ್ಗುಗಳಿಗೆ ಎಣ್ಣೆಯನ್ನು ಹಿಡಿದಿಟ್ಟುಕೊಳ್ಳುವ ಶಕ್ತಿಯಿದೆ. ಹೀಗಾಗಿಯೇ ಎಲೆಗಳು ತಾಸುಗಟ್ಟಲೆ ಉರಿಯಬಲ್ಲವು ಎಂಬುದು ಮತ್ತೊಂದು ಅಚ್ಚರಿ.
ಹೌದು, ಈ ಮರದ ಎಲೆಗಳಲ್ಲಿ ಹೊಟ್ಟಿನ ರೀತಿಯ ಒಂದು ವಸ್ತು ಉತ್ಪತ್ತಿಯಾಗುವುದರಿಂದ ಹತ್ತಿ ದೀಪದಂತೆ ಈ ಮರದ ಎಲೆಗಳು ಉರಿಯುತ್ತವೆ‌.

ಇದರ ಮೊಗ್ಗಿಗೆ ಎಣ್ಣೆ ಸವರಿ ಹೊತ್ತಿಸಿದಾಗ ಕೂಡ ಹಣತೆಯಂತೆ ಉರಿಯುತ್ತದೆ. ಬೇರೆ ಯಾವ ಮರದ ಮೊಗ್ಗುಗಳಲ್ಲೂ ಈ ವಿಶಿಷ್ಟತೆ ಇದುವರೆಗೂ ಕಂಡು ಬಂದಿಲ್ಲ. ಕಾಡಿನಲ್ಲಿ ವಾಸಿಸುವ ಗಿರಿಜನರು ಸೀಮೆಎಣ್ಣೆ ಬತ್ತಿ, ಹಣತೆ ಬದಲಿಗೆ ಈ ಮೊಗ್ಗಿಗೆ ಹರಳೆಣ್ಣೆ, ಇಲ್ಲವೇ ಎಳ್ಳಣ್ಣೆಯನ್ನು ಸವರಿ ರಾತ್ರಿ ವೇಳೆ ಮನೆಯೊಳಗೆ ಉರಿಸುತ್ತಿದ್ದರು. ಆದರೆ ಇತ್ತೀಚಿಗೆ ಮನುಷ್ಯ ಆಧುನಿಕತೆಗೆ ಒಡ್ಡಿಕೊಂಡಂತೆ ಈ ಮೊಗ್ಗು ತೆರೆಗೆ ಸರಿದು ಬಣ್ಣ ಬಣ್ಣದ ಲ್ಯಾಂಪ್‌ಗಳು ಬಂದಿವೆ.

Exit mobile version