ಕನ್ನಡದಲ್ಲಾಗಬೇಕು ಬ್ಯಾಂಕ್‌ ವ್ಯವಹಾರ ಜಾಗೃತಿ ಕಾರ್ಯಕ್ರಮ

ಬೆಂಗಳೂರು, ಜ. 07: ಸಿಲಿಕಾನ್‌ ಸಿಟಿಯಲ್ಲಿ ಬ್ಯಾಂಕ್ ಉದ್ಯೋಗವನ್ನರಸಿ ಬೇರೆ ರಾಜ್ಯದಿಂದ ಬಂದವರೇ ಹೆಚ್ಚಾಗಿ ನೇಮಕಗೊಳ್ಳುತ್ತಿದ್ದು, ಇಲ್ಲಿನ ಕನ್ನಡಿಗರಿಗೆ ವ್ಯವಹಾರ ಮಾಡಲು ಕಷ್ಟವಾಗುತ್ತಿದೆ. ಆದ್ದರಿಂದ ‘ಬ್ಯಾಂಕ್‌ ವ್ಯವಹಾರ ಕನ್ನಡದಲ್ಲಿ ನಡೆಯಬೇಕು’ ಎಂದು ಜಾಗೃತಿ ಮೂಡಿಸುವ ಕಾರ್ಯಕ್ರಮ ಬುಧವಾರ ನಗರದ ಕನಕಪುರ ರಸ್ತೆಯ ವಿವಿಧ ಬ್ಯಾಂಕ್‌ಗಳ ಶಾಖಾ ಕಚೇರಿಗಳಲ್ಲಿ ನಡೆಯಿತು.

ಕನಕಪುರ ರಸ್ತೆ ಕನ್ನಡ ಬಳಗದ ಮುಖ್ಯಸ್ಥೆ ಭಾರ್ಗವಿ ಹೇಮಂತ್‌ ನೇತೃತ್ವದಲ್ಲಿ ಬಳಗದ ಕಾರ್ಯಕರ್ತರು ಕನ್ನಡ ಜಾಗೃತಿ ಫಲಕಗಳನ್ನು ಹಿಡಿದು ‘ಬ್ಯಾಂಕ್‌ ವ್ಯವಸ್ಥಾಪಕರು ಮತ್ತು ಸಿಬ್ಬಂದಿ ಗ್ರಾಹಕರೊಡನೆ ಕನ್ನಡದಲ್ಲಿ ಮಾತನಾಡಬೇಕು. ಕನ್ನಡದಲ್ಲೆ ಸೂಚನಾ ಫಲಕಗಳನ್ನು ಹಾಕಬೇಕು’ ಎಂದು ಮನವಿ ಮಾಡಿದ್ದಾರೆ.

‘ಬ್ಯಾಂಕ್‌ಗಳಲ್ಲಿ ಕನ್ನಡಿಗರಿಗೆ ಉದ್ಯೋಗಗಳೂ ಕಡಿಮೆಯಾಗಿವೆ. ಬೇರೆ ರಾಜ್ಯದಿಂದ ಬಂದು ಇಲ್ಲಿ ಸ್ಥಾಪನೆಯಾದ ಬ್ಯಾಂಕ್‌ಗಳು ಆಯಾ ರಾಜ್ಯದವರನ್ನೇ ಆದ್ಯತೆ ಕೊಟ್ಟು ಉದ್ಯೋಗಕ್ಕೆ ನೇಮಿಸಿಕೊಳ್ಳುತ್ತವೆ. ಅವರು ಕನ್ನಡ ಮಾತನಾಡುವುದಿಲ್ಲ. ಬದಲಾಗಿ ತಮ್ಮ ನೆಲದ ಭಾಷೆಯನ್ನು ಮಾತನಾಡುತ್ತಾರೆ. ಇದರಿಂದಾಗಿ ಒಂದೆಡೆ ಕನ್ನಡಿಗರು ಅವಕಾಶ ವಂಚಿತರಾಗುತ್ತಿದ್ದಾರೆ. ಇನ್ನೊಂದೆಡೆ ಸಾಮಾನ್ಯ ಗ್ರಾಹಕರಿಗೆ ಸಂವಹನ ಸಮಸ್ಯೆ ಎದುರಿಸಬೇಕಾಗಿ ಬಂದಿದೆ. ಇದನ್ನು ಬ್ಯಾಂಕ್‌ ಆಡಳಿತಗಳ ಗಮನಕ್ಕೆ ತಂದರೂ ಪ್ರಯೋಜನ ಆಗಿಲ್ಲ. ಆದ್ದರಿಂದ ನಾವು ಖುದ್ದಾಗಿ ಬ್ಯಾಂಕ್‌ಗಳಿಗೆ ಹೋಗಿ ಜಾಗೃತಿ ಮೂಡಿಸುತ್ತಿದ್ದೇವೆ’ ಎಂದು ಭಾರ್ಗವಿ ಹೇಳಿದರು.

ಕನಕಪುರ ರಸ್ತೆಯ ಸೆಂಟ್ರಲ್ ಬ್ಯಾಂಕ್, ಎಚ್‌ಡಿಫ್‌ಸಿ ಬ್ಯಾಂಕ್‌ನಲ್ಲಿ ಜಾಗೃತಿ ಮೂಡಿಸಲಾಯಿತು. ದಿವ್ಯಾ, ದಿಲೀಪ್, ಡಾ.ಲಲ್ಲು ಜಾಗೃತಿ ಅಭಿಯಾನದಲ್ಲಿ ಭಾಗವಹಿಸಿದ್ದರು.

Exit mobile version