ಮಂಗಳೂರು ನ 9 : ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ವಕೀಲ ರಾಜೇಶ್ ಪತ್ತೆಗಾಗಿ ಮಂಗಳೂರು ಪೊಲೀಸರು ದೇಶಾದ್ಯಂತ ಲುಕೌಟ್ ನೋಟಿಸ್ ಜಾರಿಗೊಳಿಸಿದ್ದಾರೆ
ಆರೋಪಿ ರಾಜೇಶ್ ಎಲ್ಲಾದರೂ ಕಂಡುಬಂದಲ್ಲಿ ಕೂಡಲೇ ಪೊಲೀಸರಿಗೆ ತಿಳಿಸುವಂತೆ ಹೇಳಿ ನೋಟೀಸನ್ನು ಬಸ್ ನಿಲ್ದಾಣ, ಹೋಟೆಲ್, ದೇಶದ ಎಲ್ಲ ವಿಮಾನ ನಿಲ್ದಾನಗಳು ರೈಲು ನಿಲ್ದಾಣಗಳು ಸೇರಿದಂತೆ ದಕ್ಷಿಣ ಭಾರತದ ಎಲ್ಲ ರಾಜ್ಯಗಳ ಪೊಲೀಸ್ ಠಾಣೆಗಳಿಗೆ ಈ ನೋಟೀಸ್ ರವಾನೆಯಾಗಲಿದೆ.
ಪ್ರಕರಣದ ತನಿಖೆಗಾಗಿ ಮಂಗಳೂರು ಪೊಲೀಸರನ್ನು ಒಳಗೊಂಡ ಆರು ತಂಡವನ್ನು ರಚಿಸಲಾಗಿದ್ದು, ವಕೀಲನ ಪತ್ತೆಗಾಗಿ ತಮಿಳುನಾಡು, ಕೇರಳ, ಆಂಧ್ರ ಪ್ರದೇಶ ಪೊಲೀಸರ ನೆರವನ್ನೂ ಮಂಗಳೂರು ಪೊಲೀಸರು ಕೇಳಿದ್ದಾರೆ ಎಂದು ಹೇಳಲಾಗಿದೆ. ಸದ್ಯ ವಕೀಲ ರಾಜೇಶ್ ಚೆನ್ನೈ, ಹೈದರಾಬಾದ್ ಹೀಗೆ ವಿವಿಧ ಕಡೆಗಳಿಗೆ ತೆರಳುತ್ತಿದ್ದು, ಪೊಲೀಸರಿಂದ ತಪ್ಪಿಸಿಕೊಂಡು ತಿರುಗಾಡುತ್ತಿದ್ದಾರೆ ಎನ್ನುವ ಮಾಹಿತಿಯೂ ಲಭಿಸಿದೆ. ಹೀಗಾಗಿ ದಕ್ಷಿಣ ಭಾರತದ ಎಲ್ಲ ಭಾಷೆಗಳಲ್ಲಿ ಲುಕೌಟ್ ನೋಟೀಸನ್ನು ಬರೆಯಲಾಗಿದ್ದು, ಅದನ್ನು ವಿವಿಧ ಭಾಗಗಳಿಗೆ ರವಾನಿಸಲಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.