Hassan: ಸಕಲೇಶಪುರ (Sakaleshpur) ತಾಲೂಕು ಮತ್ತು ಆಲೂರು ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಬೆಳೆದ ಕೃಷಿ ಮೇಲೆ ಹಾಗೂ ರೈತರ ಮೇಲೆ ಕಾಡಾನೆ ದಾಳಿ ನಡೆಸಿ ಈವರೆಗೂ 65 ಕ್ಕೂ ಹೆಚ್ಚು ಜನರನ್ನು ಬಲಿಪಡೆದಿರುವ ಪುಂಡ ಕಾಡಾನೆಗಳ ನಿಯಂತ್ರಣಕ್ಕೆ ಅರಣ್ಯ ಇಲಾಖೆ ರೇಡಿಯೋ ಕಾಲರ್ ಅಳವಡಿಕೆಗೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ನವೆಂಬರ್ ಮೊದಲ ವಾರದಿಂದ 9 ಕಾಡಾನೆಗಳಿಗೆ ರೇಡಿಯೋ ಕಾಲರ್ (Radio Collar) ಅಳವಡಿಸಲು ಅರಣ್ಯ ಇಲಾಖೆ ಪೂರ್ವ ಸಿದ್ಧತೆ ನಡೆಸಿದೆ.
ಈ ಜಿಲ್ಲೆಯಲ್ಲಿ ಕಾಡಾನೆ ಸಮಸ್ಯೆ ಇತ್ತೀಚಿನದಲ್ಲ. ಸುಮಾರು ದಶಕಗಳ ಕಾಲದಿಂದಲೂ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದ್ದು, ಕಾಡಾನೆ ದಾಳಿಯಿಂದ ಈವರೆಗೆ 65 ಜನ ಮೃತಪಟ್ಟಿದ್ದಾರೆ. ಕಳೆದ ಒಂದು ವರ್ಷದಲ್ಲಿ 1.30 ಕೋಟಿ ರೂ. ಪರಿಹಾರ ನೀಡಲಾಗಿದೆ. ಆದರೂ ದಿನನಿತ್ಯ ರೈತ ವರ್ಗ,ಗ್ರಾಮೀಣ ಭಾಗದ ಜನಸಾಮಾನ್ಯರು ಜೀವ ಕೈಯಲ್ಲಿ ಹಿಡಿದು ಬದುಕುವಂತಹ ಪರಿಸ್ಥಿತಿ ಎದುರಾಗಿದ್ದು, ಕಾಡಾನೆಗಳು ಇತ್ತೀಚಿನ ದಿನಗಳಲ್ಲಿ ಊರಿನ ಪ್ರಮುಖ ರಸ್ತೆಯಲ್ಲೇ ರಾಜಾರೋಷವಾಗಿ ಓಡಾಡುತ್ತಾ ಜನರಲ್ಲಿ ಆತಂಕ ಸೃಷ್ಟಿಸುತ್ತಿವೆ.
ಅರಣ್ಯ ಸಚಿವ ಈಶ್ವರಖಂಡ್ರೆ (Ishwara Khandre) ಅಧ್ಯಕ್ಷತೆಯಲ್ಲಿ ಕಾಡಾನೆ ಪ್ರದೇಶದ ರೈತಾಪಿ ವರ್ಗ ಹಾಗೂ ಜನಸಾಮಾನ್ಯರ ಸಮಸ್ಯೆ ಆಲಿಸಲು, ಪರಿಹಾರ ಮಾರ್ಗ ಕಂಡುಕೊಳ್ಳಲು ಅರಣ್ಯಾಧಿಕಾರಿಗಳ ಸಭೆ ನಡೆಸಿ ರೇಡಿಯೋ ಕಾಲರ್ ಅಳವಡಿಸಲು ಅನುಮತಿ ದೊರೆತಿದ್ದು, ಅದರ ಹೊರತಾಗಿ ಇಂದಿಗೂ ಕಾಡಾನೆಗಳ ಸಮಸ್ಯೆ ತಪ್ಪುತ್ತಿಲ್ಲ. ಇನ್ನು ಯಾವ ಕ್ಷಣದಳ್ಳಿ ಸಾವು ಸಂಭವಿಸುತ್ತದೆಯೂ ಎಂಬ ಭಯದಲ್ಲಿ ಜೀವನ ನಡೆಸುವಂತಾಗಿದೆ. ಆನೆ ಕಾರಿಡಾರ್ ನಿರ್ಮಿಸಿ ಎಂಬ ಒತ್ತಾಯ ಅರಣ್ಯರೋದನವಾಗಿದೆ.
ಬೆಂಗಳೂರಿನಲ್ಲಿಯೇ ಆಗಿನ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ (B.S.Yediyurappa) , ಎಚ್.ಡಿ.ಕುಮಾರಸ್ವಾಮಿ (H.D.Kumarswamy) ಅಧ್ಯಕ್ಷತೆಯಲ್ಲಿ ಕಾಡಾನೆ ಪ್ರದೇಶದ ಶಾಸಕರು, ಅರಣ್ಯ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಸಿ ಸುದೀರ್ಘ ಚರ್ಚೆ ನಡೆದಿತ್ತಾದರೂ, ಇಂದಿನವರೆಗೂ ಯಾವ ಪ್ರತಿಫಲವನ್ನು ಕಾಣಲು ಸಾಧ್ಯವಾಗಲಿಲ್ಲ ಎಂದು ಜನರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ದಶಕಗಳಿಂದಲೂ ಮೂರು ಸಾವಿರ ಎಕರೆಯಷ್ಟು ಭೂಮಿಯನ್ನು ಸರಕಾರಕ್ಕೆ ಬಿಟ್ಟುಕೊಡುತ್ತೇವೆ. ಸೂಕ್ತ ಪರಿಹಾರ ನೀಡಿ ಎಂಬ ಬೇಡಿಕೆ ಇಡುತ್ತಲೇ ಬಂದಿದ್ದು, ಸಕಲೇಶಪುರ ತಾಲೂಕು ಹೆತ್ತೂರು ಭಾಗದ ರೈತರು ಕಾಡಾನೆ ಸಮಸ್ಯೆಯಿಂದ ಬೇಸತ್ತು ಹೋಗಿದ್ದಾರೆ. ಈ ಬಗ್ಗೆ ಇತ್ತೀಚೆಗಷ್ಟೇ ಸರ್ಕಾರ ಈ ಕುರಿತು ಸ್ವಲ್ಪ ಒಲವು ತೋರಿದಂತೆ ಕಾಣುತ್ತಿದೆ.
ನವೆಂಬರ್ (November) ಮೊದಲವಾರದಿಂದ ಒಂಬತ್ತು ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸುವ ಕಾರ್ಯಾಚರಣೆ ಪ್ರಾರಂಭವಾಗಲಿದ್ದು, ಪೂರ್ವ ಸಿದ್ಧತೆ ನಡೆದಿದೆ. ಈ ಹಿಂದೆ ಗುರುತಿಸಿದ್ದ ಆನೆಗಳನ್ನು ಇನ್ನೊಮ್ಮೆ ಗುರುತಿಸಲಾಗುತ್ತದೆ ಎಂದು ಮೋಹನ್ ಡಿಎಫ್ಒ (DFO) ತಿಳಿಸಿದ್ದಾರೆ.
ಭವ್ಯಶ್ರೀ ಆರ್.ಜೆ