Mandya: ಲೋಕಸಭಾ ಚುನಾವಣೆಯ ಹಿನ್ನೆಲೆ ಹೆಚ್.ಡಿ ಕುಮಾರಸ್ವಾಮಿಗೆ (H.D Kumaraswamy) ಸಂಸದೆ ಸುಮಲತಾ ಬೆಂಬಲ ಸೂಚಿಸಿ ಬಿಜೆಪಿಗೆ ಸೇರಿದ ಬೆನ್ನಲ್ಲೇ, ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಮಾಜಿ ಸಂಸದೆ, ನಟಿ ರಮ್ಯಾ ಪ್ರಚಾರಕ್ಕೆ ಒಪ್ಪಿಗೆ ಸೂಚಿಸಿದ್ದಾರೆಂದು ಹೇಳಲಾಗ್ತಿದೆ. ಈ ಮೊದಲು ಇದೇ ಕ್ಷೇತ್ರದ ಸಂಸದರಾಗಿ ಜನಮನ ಗೆದ್ದಿದ್ದ ರಮ್ಯಾ ಅವರನ್ನು ಪ್ರಚಾರಕ್ಕೆ ಕರೆಸಿ ಮತದಾರರನ್ನ ಸೆಳೆಯಲು ಕಾಂಗ್ರೆಸ್ ಮಾಸ್ಟರ್ ಪ್ಲ್ಯಾನ್ ಮಾಡಿತ್ತು. ಇದೀಗ ಕಾಂಗ್ರೆಸ್ (Congress) ಪಕ್ಷದ ನಾಯಕರ ಮಾತಿನಂತೆ ಮಂಡ್ಯ ಕ್ಷೇತ್ರಕ್ಕೆ ಪ್ರಚಾರ ಕಾರ್ಯಕ್ಕೆ ಆಗಮಿಸಲಿದ್ದಾರೆ ನಟಿ ರಮ್ಯಾ (Ramya).
ಕಾಂಗ್ರೆಸ್ ಸರ್ಕಾರ ಏಪ್ರಿಲ್ (April) 17 ಅಥವಾ 20 ರಂದು ಮಂಡ್ಯದಲ್ಲಿ ಬೃಹತ್ ಸಮಾವೇಶ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಸಮಾವೇಶದಲ್ಲಿ ರಾಹುಲ್ ಗಾಂಧಿ (Rahul Gandhi) ಸೇರಿದಂತೆ ಹಲವರು ಕಾಂಗ್ರೆಸ್ ನಾಯಕರು ಹೆಚ್ಡಿಕೆ (HDK) ವಿರುದ್ಧ ತಂತ್ರ ಹೆಣೆದು ಮತದಾರರನ್ನು ಸೆಳೆಯಲು ಮುಂದಾಗಿದ್ದಾರೆಂದು ತಿಳಿದುಬಂದಿದೆ.
ಇದರ ನಡುವೆ ಸಿಎಂ ಸಿದ್ದರಾಮಯ್ಯರಿಂದ ಒಂದು ದಿನ, ಮಂಡ್ಯ ಲೋಕಾಸಭಾ ಕ್ಷೇತ್ರದ ಕೆ.ಆರ್ ನಗರ (K.R Nagar), ಕೆ.ಆರ್ ಪೇಟೆಯಲ್ಲಿ ಮತಯಾಚನೆ ನಡೆಯಲಿದೆ. ಇನ್ನೊಂದು ದಿನ ಡಿಸಿಎಂ ಡಿ.ಕೆ ಶಿವಕುಮಾರ್ (D.K Shivakumar) ಮಂಡ್ಯದಲ್ಲಿ ಪ್ರವಾಸ ಕೈಗೊಂಡು ಜನರ ಮನ ಒಲಿಸಲು ಈಗಾಗಲೇ ಪ್ಲಾನ್ ರೂಪಿಸಿದೆ. ರಮ್ಯಾ ಜೊತೆ ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್ ಈಗಾಗಲೇ ಮಾತುಕತೆ ನಡೆಸಿದ್ದು, ಮಂಡ್ಯ ಕ್ಷೇತ್ರದ ಕ್ಯಾಂಪೇನ್ಗೆ ಬರಲು ಅವರು ಒಪ್ಪಿಗೆ ಸೂಚಿಸಿದ್ದಾರೆ.
ಮುಂದಿನ ವಾರ ಅಭ್ಯರ್ಥಿ ಜೊತೆ ರೋಡ್ ಶೋ (Road Show) ನಡೆಸುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಒಕ್ಕಲಿಗರ ಭದ್ರಕೋಟೆಯಲ್ಲಿ ಗೆಲುವು ಸಾಧಿಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಇದಕ್ಕೆ ಸಾಥ್ ನೀಡಲಿದ್ದಾರೆ ಎಂಬ ಮಾತು ಕಾಂಗ್ರೆಸ್ ಪಾಳಯದಲ್ಲಿ ಕೇಳಿಬಂದಿದೆ.