ಆರ್.ಜೆ ರಚನಾ ಅವರ ಕಣ್ಣನ್ನು ದಾನ ಮಾಡಲು ಮುಂದಾದ ಕುಟುಂಬಸ್ಥರು ; ಸಾವಿನಲ್ಲೂ ಸಾರ್ಥಕತೆ ಮೆರೆದ ರಚನಾ!

ರೆಡಿಯೋ ಸಿಟಿಯಲ್ಲಿ ಐತ್ತಲಕಡಿ ಶೋ ನಡೆಸಿಕೊಡುತ್ತ ಸದಾ ಹಸನ್ಮುಖಿಯಾಗಿ ಕನ್ನಡಿಗರನ್ನು ಮಾತನಾಡಿಸುತ್ತಿದ್ದ ಚೆಲುವೆ ಆರ್.ಜೆ ರಚನಾ ಅವರು ಇಂದು ಇಲ್ಲ ಎಂಬ ವಿಷಯವನ್ನು ಅರಗಿಸಿಕೊಳ್ಳುವುದೇ ಕಷ್ಟದ ಸಂಗತಿಯಾಗಿದೆ. ಮಾತಿನಲ್ಲೇ ಕಚಗುಳಿ ಇಟ್ಟಿದ್ದ ಆರ್.ಜೆ ರಚನಾ ಇಂದು ಹೃದಯಾಘಾತದಿಂದ ಸಾವನಪ್ಪಿದ್ದಾರೆ. ಆರ್.ಜೆ ರಚನಾ ಅವರನ್ನು ಕಳೆದುಕೊಂಡ ಕುಟುಂಬಸ್ಥರು ದುಃಖತಪ್ತರಾದರೂ ಕೂಡ ರಚನಾ ಅವರ ಕಣ್ಣುಗಳನ್ನು ದಾನ ಮಾಡಲು ಮುಂದಾಗಿದ್ದಾರೆ. ಈ ಮೂಲಕ ಸಾವಿನಲ್ಲೂ ರಚನಾ ಅವರು ಸಾರ್ಥಕತೆ ಮೆರೆದಿದ್ದಾರೆ.

ಕಳೆದ 7 ವರ್ಷದಿಂದ ರೆಡಿಯೋ ಜಾಕಿ ಕೆಲಸವನ್ನು ಬಿಟ್ಟು ಜೆ.ಪಿ ನಗರದ ಅಪಾರ್ಟ್ ಮೆಂಟ್ ನಲ್ಲಿ ವಾಸಿಸುತ್ತಿದ್ದರು. ‍ಈ ಮೂಲಕ ರೇಡಿಯೋ ಜಾಕಿ ಕೆಲಸಕ್ಕೆ ವಿದಾಯ ಹೇಳಿ ಮನೆಯಲ್ಲೇ ಇದ್ದರು. ದೈಹಿಕವಾಗಿ ರಚನಾ ಅವರು ಆರೋಗ್ಯವಾಗಿದ್ದರು ಆದರೆ, ಇದ್ದಕ್ಕಿದ್ದ ಹಾಗೆ ಹೃದಯಾಘಾತವಾಗಿರುವುದು ನಿಜಕ್ಕೂ ಎಲ್ಲರಿಗೂ ಆಶ್ಚರ್ಯ ನೀಡಿದೆ. ರಚನಾ ಅವರು ನಟ ರಕ್ಷಿತ್ ಶೆಟ್ಟಿ ಅವರ ನಟನೆಯ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಅವರ ಮುದ್ದು- ಪೆದ್ದು ಸಹೋದರಿಯ ಪಾತ್ರ ನಿರ್ವಹಿಸಿದ್ದರು.

ತಮ್ಮ ಜೆ.ಪಿ ನಗರದ ಅಪಾರ್ಟ್ ಮೆಂಟ್ ಫ್ಲಾಟ್ನಲ್ಲಿ ಇದ್ದ ರಚನಾ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ಬಳಿಕ ಶೀಘ್ರವೇ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅವರು ದಾರಿಯ ಮಧ್ಯೆಯೇ ಸಾವನಪ್ಪಿರುವುದು ಖಚಿತವಾಗಿದೆ. ರಚನಾ ಅವರ ಸಾವಿನ ಸುದ್ದಿ ಎಲ್ಲರಿಗೂ ಅತೀವ ದುಃಖ ತಂದೊಡ್ಡಿದೆ. ಮಾತಿನಲ್ಲೇ ಕನ್ನಡಿಗರ ಮನಗೆದಿದ್ದ ರಚನಾ ಅವರಿಗೆ 39 ವರ್ಷ ವಯಸ್ಸು. ಆರೋಗ್ಯವಾಗಿದ್ದ ರಚನಾ ಅವರು ಹೃದಯಾಘಾತದಿಂದ ಸಾವನಪ್ಪಿರುವ ಸಂಗತಿ ಈಗಲೂ ನಂಬಲು ಅಸಾಧ್ಯ!

Exit mobile version