ಶ್ರೀಕಿಗೆ ಜಾಮೀನು ನೀಡಿದ್ದು ಯಾರು ?

ಬೆಂಗಳೂರು ನ 11 : ಹ್ಯಾಕರ್ ಶ್ರೀಕಿಗೆ ಕೊನೆಗೂ ಜಾಮೀನು ಸಿಕ್ಕಿದ್ದು, ಆದರೆ ಜಾಮೀನು ನೀಡಿದವರು ಯಾರು ಎಂದು ತಿಳಿದುಬಂದಿಲ್ಲ. ಖಾಸಗಿ ಹೋಟೆಲ್ ನಲ್ಲಿ ನಡೆದ ಗಲಾಟೆ, ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಜಾಮೀನು ಪಡೆದು ಹೊರ ಬಂದ ಬಳಿಕ ನನಗೆ ಏನೂ ಗೊತ್ತಿಲ್ಲ ನನ್ನ ಪಾಡಿಗೆ ನನ್ನ ಬಿಟ್ಟು ಬಿಡಿ ಎಂದು ಹೇಳಿಕೆ ನೀಡಿದ್ದಾನೆ.

ಜೈಲಿನಿಂದ ಹೊರ ಬಂದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀಕಿ, ನಾನ್ ಹೇಳೋಕೆ ಏನು ಇಲ್ಲ. ಸುಮ್ಮನೆ ನನ್ನ ಹೆಸರು ತರುತ್ತಿದ್ದಾರೆ. ನಂಗೇನು ಗೊತ್ತಿಲ್ಲ. ನಾನ್ ಹೋಗಬೇಕು ನನ್ನ ಬಿಟ್ಟುಬಿಡಿ. ಬಿಟ್ ಕಾಯಿನ್ ಬಗ್ಗೆ ನಂಗೆ ಏನು ಇಲ್ಲ ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ನನಗೆ ಏನು ಗೊತ್ತಿಲ್ಲ ಎಂದಿದ್ದಾನೆ.

ಖಾಸಗಿ ಹೋಟೆಲ್‍ನಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೋಟೆಲ್ ಸಿಬ್ಬಂದಿ ಜೀವನ್ ಭೀಮಾನಗರ ಪೊಲೀಸರಿಗೆ ದೂರು ನೀಡಿದ್ದ ಹಿನ್ನೆಲೆ ಶ್ರೀಕಿ ಮತ್ತು ಆತನ ಸ್ನೇಹಿತ ವಿಷ್ಣುವನ್ನು ಬಂಧಿಸಲಾಗಿತ್ತು. ಬಳಿಕ ಶ್ರೀಕಿಯನ್ನು ನ್ಯಾಯಾಂಗ ಬಂಧನಕ್ಕೆ ಪೊಲೀಸರು ಒಪ್ಪಿಸಿದ್ದರು. ವಿಷ್ಣುವನ್ನು ಕಷ್ಟಡಿಗೆ ತೆಗೆದುಕೊಂಡು ಪೊಲೀಸರು ವಿಚಾರಣೆ ನಡೆಸುತ್ತಿರುವ ಬೆನ್ನಲ್ಲೆ ಪರಪ್ಪನ ಅಗ್ರಹಾರದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಶ್ರೀಕಿಗೆ ಮೊನ್ನೆ ಸಂಜೆ ನ್ಯಾಯಾಲಯ ಜಾಮೀನು ನೀಡಿತ್ತು.ನಿನ್ನೆ  ಮಧ್ಯಾಹ್ನ ಜಾಮೀನು ಪ್ರತಿ ಜೈಲಧಿಕಾರಿಗಳ ಕೈ ತಲುಪಿರುವ ಹಿನ್ನೆಲೆ, ಬಿಡುಗಡೆ ಗೊಳಿಸಿದ್ದಾರೆ.

Exit mobile version