ಮರ ಮುಪ್ಪಾದರೂ ಹುಳಿ ಮುಪ್ಪೆ ; ನಿಮ್ಮ ಬಾಲ್ಯದಲ್ಲಿತ್ತ ಹುಣಸೆ ಜೊತೆಗಿನ ಒಡನಾಟ?

tamarind

ಹುಣಸೆ (Tamarind )ಚಿಗುರಿನಿಂದ ಹಿಡಿದು ಒಣಗಿದ ಎಲೆಯವರೆಗೂ ತನ್ನನ್ನು ತಾನು ಮಾನವನಿಗೆ ಅರ್ಪಿಸುತ್ತಾ ಬಂದಿದೆ ಈ ಹುಣಸೆ. ನಾವು ಪ್ರತಿದಿನ ಬಳಸುವ ಹುಣಸೆಯ ತಾಯ್ನಾಡು ಆಫ್ರಿಕಾ ದೇಶ(Africa Country).

ಅರಬೀಯನ್ನರು ಭಾರತದ ಖರ್ಜೂರವೆಂದೂ(Indian Date) ಸಹ ಕರೆಯುತ್ತಿದ್ದರು (ತಮರ್- ಇ- ಹಿಂದ್ ). ನಮ್ಮ ಹಿರಿಯರ ಕಾಲದಲ್ಲಿ ಹುಣಸೇ ಬಹಳ ಪ್ರಾಮುಖ್ಯತೆಯನ್ನು ಹೊಂದಿತ್ತು. ಹುಣಸೆ ಚಿಗುರನ್ನು ದೇಹದಲ್ಲಿನ ನೋವು ಅಥವಾ ಭಾದೆಯನ್ನು ತಣಿಸಲು ಬಳಸುತ್ತಿದ್ದರು. ಒಂದು ಬಟ್ಟೆಯಲ್ಲಿ ಹುಣಸೆ ಚಿಗುರನ್ನು ಕಟ್ಟಿ ಅದನ್ನು ಬಿಸಿ ಮಾಡಿ ತದನಂತರ ಎಲ್ಲಿ ನೋವು ಇರುತ್ತೋ ಅಲ್ಲಿ ಅದರ ಶಾಖವನ್ನು ನೀಡುತ್ತಿದ್ದರು.


ಹುಣಸೆ ಹೂವನ್ನು ಸಹಾ ತಿನ್ನಬಹುದು, ಅದೂ ಒಗರಾಗಿರುತ್ತದೆ ಮತ್ತು ಹುಳಿ, ಹುಳಿಯಾಗಿರುತ್ತದೆ. ತಿಂದವನಿಗೆ ಮಾತ್ರ ಗೊತ್ತು ಅದರ ರುಚಿ! ನಾವೆಲ್ಲ ಚಿಕ್ಕವರಿದ್ದಾಗ ಶನಿವಾರ ಯಾವಾಗ ಬರುತ್ತೆ ಅಂತ ಕಾಯ್ತಿದ್ವಿ. ನಂದೊಂದು 6 ಅಥವಾ 7 ಜನರ ಗುಂಪು ಎಲ್ಲಾ ಹುಣ್ಸೆಮರ ಕೆಳಗಡೆ ಶನಿವಾರ ಮಧ್ಯಾಹ್ನ ಸೇರ್ತಾ ಇದ್ವಿ, ಒಬ್ಬ ಉಪ್ಪಿನ ಪುಡಿ ತಂದಿರುತ್ತಿದ್ದ , ಒಬ್ಬ ಹಸಿರು ಮೆಣಸಿನಕಾಯಿ, ಇನ್ನೊಬ್ಬ ಕಾಳು ಮೆಣಸು (BLACK PAPER) ಮತ್ತು ಬೆಳ್ಳುಳ್ಳಿ ಇನ್ನು ಉಳಿದವರೆಲ್ಲಾ ಹುಣಸೆ ಪೀಚು ಕೀಳೋ ಕೆಲ್ಸಾ ಇರುತ್ತಿತ್ತು. ಆ ಮೇಲೆ ಎಲ್ಲ ಸೇರಿಸಿ ಒಟ್ಟಿಗೆ ಒಂದು ಕಲ್ಲ ಮೇಲೆ ಕುಟ್ಟಿ ಕುಟ್ಟಿ ತಿಂದ್ರೆ, ಮರುದಿನ ಬೆಳಿಗ್ಗೆ ನೀರು ಕುಡಿಯಲು ಆಗ್ತಾ ಇರ್ಲಿಲ್ಲ!

ಯಾಕಂದ್ರೆ ಹಲ್ಲುಗಳೆಲ್ಲಾ ಝುಂ ಅಂತಿದ್ವು. ಇನ್ನೂ ನಮ್ಮ ಕಣ್ತಪ್ಸಿ ಏನಾದ್ರೂ ಉಳ್ದಿದ್ರೆ ಆ ಪೀಚುಗಳು ದ್ವಾರಗಾಯಿ (ಅರ್ಧ ಮಾಗಿದ ಹಣ್ಣು) ಆಗ್ತಿದ್ವು. ಆ ದ್ವಾರಗಾಯಿ ತಿನ್ನೋ ಮಜಾ ಇದೆಯಲ್ಲಾ ತಿಂದವನಿಗಷ್ಟೇ ಗೊತ್ತು ಬಿಡಿ. ಇನ್ನೇನಿದ್ರೂ ಹುಣಸೆ ಹಣ್ಣಿನ ಕಾಲ ಆಗ್ತಾ ಇತ್ತು. ಆಗ ದೊಡ್ಡೋರು ಹುಣ್ಸೆಮರ ಕಾಯ್ತಾ ಇದ್ರು. ಇನ್ನೂ ಹುಣಸೆಹಣ್ಣು ಕದಿಯೋ ಕೆಲ್ಸಾ ಶಾಲೆಯಿಂದ ಮನೆಗೆ ತೆರಳುವ ಸಮಯದಲ್ಲಿ ಕದಿಯಬೇಕಿತ್ತು. ಹುಣಸೆಹಣ್ಣು ಚೀಪುತ್ತಾ ಶಾಲೆಯ ದಾರಿ ಹಿಡಿತಿದ್ವಿ. ಯಾವತ್ತೂ ಹಣ್ಣು ತಿಂದಿರುತ್ತೀವೋ ಆವತ್ತು ಖಾರದೂಟ ತಿನ್ನಂಗಿಲ್ಲ. ಯಾಕಂದ್ರೆ ನಾಲಿಗೆ ಸೀಳು ಆಗುವಷ್ಟರ ಮಟ್ಟಿಗೆ ನಾವು ಹುಣಿಸೆ ಚೀಪುತ್ತಿದ್ದೆವು.


ಹುಣಸೆ ಮರದ ಜೊತೆಗಿನ ನಮ್ಮ ಬಾಂಧವ್ಯ ಅಗಾಧ! ಅದರ ರೆಂಬೆ ಕೊಂಬೆಗಳ ಮೇಲೆ ಹತ್ತಿ ಆಡಿದ ಮರಕೋತಿ ಆಟ
ಹಾಗೂ ಹಗ್ಗದ ಉಯ್ಯಾಲೆ. ಈಗಿನ ಕಾಲದ ಮಕ್ಕಳಿಗೆ ನಾವು ಹುಣಸೆ ಚಿಗುರು, ಹೂವು ಎಲ್ಲ ತಿಂದು ಬೆಳೆದದ್ದು ಅಂದ್ರೆ ನಗುತ್ತಾರೆ. ಇನ್ನೂ ಅಡುಗೆ ಮನೆಯಲ್ಲಿ ಹುಣಸೆಗೆ ಅಗ್ರಸ್ಥಾನವಿದೆ. ಯಾವುದೇ ಸಾಂಬರ್ ತಗೊಂಡ್ರು ಹುಣಸೆ ಡಬ್ಬಿಗೆ ಕೈ ಹೋಗೆ ಹೋಗುತ್ತದೆ. ದೇವಸ್ಥಾನದಲ್ಲಿ ದೇವರ ಪೂಜಾ ಸಾಮಗ್ರಿಗಳನ್ನು ತೊಳೆಯಲು ಸಹ ಹುಣಸೆ ಒಂದು ಪುರಾತನ ಹಣ್ಣು. ಹುಣಸೆ ಹಣ್ಣಿನಲ್ಲಿ ವಿಟಮಿನ್ ಸಿ ಹೆಚ್ಚಾಗಿದೆ. ಆ್ಯಂಟಿ ಆಕ್ಸಿಡೆಂಟ್, ವಿಟಮಿನ್ ಎ ಮತ್ತು ಬಿ, ಪೊಟ್ಯಾಶಿಯಂ, ಫೈಬರ್ ಹುಣಸೆ ಬೀಜವು ಅತಿ ಹೆಚ್ಚು ಕ್ಯಾಲ್ಸಿಯಂ ಅನ್ನು ಹೊಂದಿದೆ.

ಹುಣಸೆ ಬೀಜವನ್ನು ಚೆನ್ನಾಗಿ ಹುರಿದು ಅದರ ಮೇಲಿನ ಸಿಪ್ಪೆಯನ್ನು ತೆಗೆದು ಬಂದಂಥ ಬೀಜವನ್ನು ಚೆನ್ನಾಗಿ ಪುಡಿ ಮಾಡಿ, ಆ ಪುಡಿಯನ್ನು ಒಂದು ಚಮಚ ಜೇನಿನ ಜೊತೆಗೆ ದಿನಕ್ಕೆ ಮೂರರಿಂದ 4 ಬಾರಿ ಸೇವಿಸುತ್ತಾ ಬಂದರೆ, ದೇಹದಲ್ಲಿನ ಗಟ್ಟಿಯಾದ ಕಫವೂ ಕರಗುತ್ತದೆ ಮತ್ತು ಸಂಧಿವಾತಗಳಿಗೆ ಇದು ರಾಮಬಾಣ. ಸೂಚನೆ ಏನೆಂದರೆ, 5 ಗ್ರಾಂ ಗಿಂತ ಹೆಚ್ಚು ಸೇವನೆ ಸರಿಯಲ್ಲ. ಅದು ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರಬಹುದು. ಹುಣಸೆ ಮರವನ್ನು ಗೃಹೋಪಯೋಗಿ ಮತ್ತು ಪೀಠೋಪಕರಣ ತಯಾರಿಕೆಯಲ್ಲಿಯೂ ಬಳಸುತ್ತಾರೆ. ನಾವು ಚಿಕ್ಕ ವಯಸ್ಸಿನಲ್ಲಿ ಇದ್ದಾಗ, ಹುಣಸೆ ಮರದಲ್ಲಿ ಸಂಜೆಯಾದ ನಂತರ ಪ್ರೇತಾತ್ಮಗಳು ಹುಣಸೆ ಮರದಲ್ಲಿ ಇರುತ್ತೆ, ಹೀಗಾಗಿ ಅಲ್ಲಿ ಯಾರೂ ಸುಳಿಯಬಾರದೆಂದು ನಮ್ಮ ಹಿರಿಯರು ನಮ್ಮನ್ನು ಹೆದರಿಸುತ್ತಿದ್ದರು.

ಅದಕ್ಕೆ ಯಾವುದೇ ಪುರಾವೆಗಳಿಲ್ಲದಿದ್ದರೂ ವೈಜ್ಞಾನಿಕವಾಗಿ ಹೇಳಬೇಕೆಂದರೆ ಹುಣಸೆ ಮರವು ಅತಿಹೆಚ್ಚು ಕಾರ್ಬನ್ ಡಯಾಕ್ಸೈಡ್ ಅನ್ನು ಹೊರಸೂಸುತ್ತದೆ. ಆದ ಕಾರಣ ನಮ್ಮ ಹಿರಿಯರು ನಮ್ಮನ್ನು ಅಲ್ಲಿ ಹೋಗದಂತೆ ತಡೆಯುತ್ತಿದ್ದರು. ಹುಣಸೆ ಹಣ್ಣಿನಿಂದ ಮಾಡುವಂತಹ ಭಕ್ಷ್ಯ ಭೋಜನಗಳು ನಿಮಗೆಲ್ಲ ಚಿರಪರಿಚಿತವೇ ಆಗಿರುತ್ತದೆ. ಹೊಸದಾಗಿ ಕಿತ್ತ ಹುಣಸೆ ಹಣ್ಣು ಬಹಳ ಹುಳಿಯಾಗಿರುತ್ತದೆ. ಅತಿಯಾದ ಸೇವನೆ ಬೇಧಿಯನ್ನು (ನಿರ್ಜಲೀಕರಣ ) ಮಾಡಿಸುತ್ತದೆ. ಹಳೆಯ ಹುಣಸೆಯನ್ನು ಬಳಸಲು ಯೋಗ್ಯವಾಗಿರುತ್ತದೆ.

ನಿಯಮಿತ ಉಪಯೋಗದಿಂದ ಇದು ವಾತಪಿತ್ತವನ್ನು ಶಾಂತಗೊಳಿಸುತ್ತದೆ ಹೃದಯದ ಆರೋಗ್ಯಕ್ಕೆ ಇದು ಪರಿಣಾಮಕಾರಿ ಹುಣಸೆಯ ಅತಿ ಹೆಚ್ಚು ಸೇವನೆಯಿಂದ ರಕ್ತವು ಕೆಡುತ್ತದೆ. ಮೈಸೂರು ರಾಷ್ಟ್ರೀಯ ಹೆದ್ದಾರಿ ಮತ್ತು ತುಮಕೂರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾರ್ಯದಲ್ಲಿ ಅಸಂಖ್ಯಾತ ಹುಣಸೆ ಮರಗಳಿಗೆ ನಿರ್ಧಯವಾಗಿ ಕೊಡಲಿ ಹಾಕಿದ್ದರು. ಅಂದು ಎಲ್ಲಿ ನೋಡಿದರೂ ಬರೀ ಕಾಡೇ ಕಾಣುತ್ತಿತ್ತು. ಇಂದು ಎಲ್ಲಿ ನೋಡಿದರೂ ಬರೀ ಕಪ್ಪು ರೋಡೆ ಕಾಣುತ್ತಿದೆ. ಇದು ನಿಜಕ್ಕೂ ಬೇಸರದ ಸಂಗತಿ ಎಂದೇ ಹೇಳಬಹದು. ಇಂದು ಅದೇ ನೈಸರ್ಗಿಕ ಹುಣಸೆಗೆ ಹಣ ಕೊಟ್ಟು ತಿನ್ನುವಂತ ಪರಿಸ್ಥಿತಿ ಒದಗಿದೆ.
Exit mobile version