ವಿಶ್ವ ವಿದ್ಯಾರ್ಥಿಗಳ ದಿನ ಯಾಕೆ ಆಚರಿಸ್ತೀವಿ?

ಒಂದು ದೇಶ ಭ್ರಷ್ಟಾಚಾರ ಮುಕ್ತವಾಗಿ ಮತ್ತು ಸುಂದರ ಮನಸ್ಸಿನ ರಾಷ್ಟ್ರವಾಗಬೇಕಾದರೆ, ಮೂರು ಪ್ರಮುಖ ಸಾಮಾಜಿಕ ಸದಸ್ಯರು ಬದಲಾವಣೆಯನ್ನು ತರಬಹುದು ಎಂದು ನಾನು ಬಲವಾಗಿ ಭಾವಿಸುತ್ತೇನೆ. ಅವರು ತಂದೆ, ತಾಯಿ ಮತ್ತು ಶಿಕ್ಷಕರು.

ಇದು ದೇಶ ಕಂಡ ಶ್ರೇಷ್ಠ ವಿಜ್ಞಾನಿ, ಕ್ಷಿಪಣಿ ತಜ್ಞ, ನೆಚ್ಚಿನ ಶಿಕ್ಷಕ  ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರ ನುಡಿ. ಅವರ ನುಡಿಗಳಲ್ಲಿ ಸ್ಪಷ್ಟತೆ ಇತ್ತು, ದೂರದೃಷ್ಟಿತ್ವ ಇತ್ತು, ದೇಶದ ಬಗ್ಗೆ ಉತ್ಕಟ ಅಭಿಮಾನ ಇತ್ತು. ಕಲಾಂ ಅವರ ಪ್ರತಿಯೊಂದು ನಡೆ, ನುಡಿಗಳು ಅನುಕರಣೀಯ. ಅವರು ಅಪ್ಪಟ ರತ್ನ, ಭಾರತ ರತ್ನ. ಇಂದು ಅಂಥಾ ಅನರ್ಘ್ಯ ರತ್ನ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಜನ್ಮ ದಿನ. ಜತೆಗೆ ಇಂದು ವಿಶ್ವ ವಿದ್ಯಾರ್ಥಿಗಳ ದಿನಾಚರಣೆಯೂ ಹೌದು. ಇಂದೇ ವಿಶ್ವ ವಿದ್ಯಾರ್ಥಿಗಳ ದಿನವನ್ನಾಗಿ ಆಚರಿಸಲು ಕಾರಣವೇನು? ಎಂಬ ಪ್ರಶ್ನೆ ಮೂಡುತ್ತದೆ. ಇದಕ್ಕೆ ಪ್ರಮುಖ ಕಾರಣ ಇದಾಗಿದೆ.

ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಹಾಗೂ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ ಈ ಧೀಮಂತ ನಾಯಕನಿಗೆ ಗೌರವ ಸಲ್ಲಿಸುವ ಸಲುವಾಗಿ 2010ರಲ್ಲಿ ೭೯ನೇ ವರ್ಷದ ಜನ್ಮದಿನಾಚರಣೆಯ ಸಂದರ್ಭದಲ್ಲಿ ವಿಶ್ವಸಂಸ್ಥೆಯು ಅಕ್ಟೋಬರ್ 15ನ್ನು ವಿಶ್ವ ವಿದ್ಯಾರ್ಥಿಗಳ ದಿನವನ್ನಾಗಿ ಘೋಷಿಸಿತು. ಅಂದಿನಿಂದ ಪ್ರತೀ ವರ್ಷ ಅಕ್ಟೋಬರ್ 15ನ್ನು ವಿಶ್ವ ವಿದ್ಯಾರ್ಥಿಗಳ ದಿನವನ್ನಾಗಿ ಆಚರಿಸಲಾಗುತ್ತಿದೆ. ಜೊತೆಗೆ ಕಲಾಂ ಅವರನ್ನು ಸ್ಮರಿಸಲಾಗುತ್ತದೆ. ಈ ಮಹಾನಾಯಕನ ಹುಟ್ಟುಹಬ್ಬದ ದಿನವನ್ನು ಪ್ರತಿ ವರ್ಷ ವಿಶ್ವ ವಿದ್ಯಾರ್ಥಿಗಳ ದಿನವೆಂದು ಆಚರಣೆ ಮಾಡಲಾಗುತ್ತದೆ. ಇಂದಿಗೂ ನಾವು ಕಲಾಂ ಅವರನ್ನು ಭಾರತದ ಅತ್ಯಂತ ಪ್ರೀತಿಯ ರಾಷ್ಟ್ರಪತಿಯಾಗಿ ಗೌರವಿಸುತ್ತೇವೆ.

ಕಲಾಂ ಅವರ ಪೂರ್ಣ ಹೆಸರು ಅವುಲ್ ಫಕೀರ್ ಜೈನುಲಬ್ದೀನ್ ಅಬ್ದುಲ್ ಕಲಾಂ ಎಂದಾಗಿದೆ. ಕಲಾಂ ಅವರು 1931ರ ಅಕ್ಟೋಬರ್ 15ರಂದು ತಮಿಳುನಾಡಿನ ರಾಮೇಶ್ವರಂನಲ್ಲಿ ಜನಿಸಿದರು. ಇವರು 2002ರಿಂದ 2007ರವರೆಗೆ ಭಾರತದ ರಾಷ್ಟ್ರಪತಿಯಾಗಿದ್ದರು. ಇವರು ಭೌತಶಾಸ್ತ್ರ ಮತ್ತು ಏರೋಸ್ಪಿಯರ್‌ ಇಂಜಿನಿಯರಿಂಗ್ ಅಧ್ಯಯನ ಮಾಡಿದ್ದರು. ಅಧ್ಯಯನ ನಂತರ ನಾಲ್ಕು ದಶಕಗಳ ಕಾಲ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿ.ಅರ್.ಡಿ.ಓ) ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ದಲ್ಲಿ ವಿಜ್ಞಾನಿ ಮತ್ತು ವಿಜ್ಞಾನ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸಿದರು. ಮಕ್ಕಳ ಬಗ್ಗೆ ಅತೀವ ಪ್ರೀತಿ, ಕಾಳಜಿ ಹೊಂದಿದ್ದ ಡಾ. ಕಲಾಂ ಅವರನ್ನು ಕಂಡರೆ ಮಕ್ಕಳಿಗೆ ಅಚ್ಚು ಮೆಚ್ಚು. ಅವರ ಭಾಷಣಗಳು ಇಂದಿಗೂ ಪ್ರಸ್ತುತ ಹಾಗೂ ಸ್ಪೂರ್ತಿದಾಯಕ.  

ಅಬ್ದುಲ್ ಕಲಾಂ ಅವರು ಭಾರತದ 11ನೇ ರಾಷ್ಟ್ರಪತಿಯಾಗಿದ್ದರು. ಅವರು ಜನರ ರಾಷ್ಟ್ರಪತಿ ಎಂದೇ ಪ್ರಖ್ಯಾತಿ ಪಡೆದಿದ್ದರು. ಕಲಾಂ ಅವರು ದೇಶದ ಜನರು ಅತೀ ಹೆಚ್ಚು ಪ್ರೀತಿಪಾತ್ರ ರಾಜಕಾರಣಿ ಎಂದರೆ ತಪ್ಪಾಗಲಾರದು. ಕಲಾಂ ಅವರು ಶಿಕ್ಷಣ ವೃತ್ತಿಯನ್ನು ಅಚ್ಚುಮೆಚ್ಚಿನ ವೃತ್ತಿಯಾಗಿತ್ತು. ಜತೆಗೆ ತಮ್ಮ ಶಿಕ್ಷಕ ವೃತ್ತಿಯನ್ನು ಅತೀವ ನೆನಪಿಸಿಕೊಳ್ಳುತ್ತಿದ್ದರು. ಅವರಿಚ್ಛೆಯಂತೆ ಕಲಾಂ ಅವರು 2015ರ ಜುಲೈ 27ರಂದು ಶಿಲ್ಲಾಂಗ್​ನಲ್ಲಿ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡುವಾಗ ವೇದಿಕೆ ಮೇಲೆ ಕುಸಿದು ಬಿದ್ದು, ತಮ್ಮ ದೇಹತ್ಯಾಗ ಮಾಡಿದರು. ಭಾರತದ ಬಾಹ್ಯಾಕಾಶ ಮತ್ತು ಕ್ಷಿಪಣಿ ಕಾರ್ಯಕ್ರಮಗಳ ಬಗ್ಗೆ ದೂರದೃಷ್ಟಿ ಹೊಂದಿದ್ದ ನಾಯಕ ಕಲಾಂ ಅವರಾಗಿದ್ದು ಅದರ ವಾಸ್ತುಶಿಲ್ಪಿಯು ಅವರೇ. ಅವರು ಸದಾ ಸ್ವಾವಲಂಬಿ ಭಾರತವನ್ನು ನಿರ್ಮಿಸುವ ಕನಸು ಕಂಡಿದ್ದರು.

ಕಲಾಂ ಅವರು ಮೂರು ಅತ್ಯಂತ ಪ್ರಮುಖ ಪುಸ್ತಕಗಳ ಲೇಖಕರಾಗಿದ್ದು, ಪದ್ಮ ಭೂಷಣ್‌, ಭಾರತ ರತ್ನ, ವೀರ ಸಾವರ್ಕರ್‌ ಪ್ರಶಸ್ತಿ ಹೀಗೆ ಅತ್ಯುನ್ನತ ಪ್ರಶಸ್ತಿಗಳು ಲಭಿಸಿವೆ. ಕಲಾಂ ಅವರ ಬ್ಯಾಲಿಸ್ಟಿಕ್‌ ಕ್ಷಿಪಣಿ ಮತ್ತು ವಾಹನ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿರುವುದಕ್ಕೆ “ಭಾರತದ ಕ್ಷಿಪಣಿ ಮನುಷ್ಯ” ಎಂದು ಕರೆಸಿಕೊಂಡಿದ್ದಾರೆ. ವಿಜ್ಞಾನಿಯಾಗಿ ಮತ್ತು ಭಾರತದ ರಾಷ್ಟ್ರಪತಿಯಾಗಿ ರಾಷ್ಟ್ರೀಯ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆಯನ್ನು ಎಂದಿಗೂ ಈ ಭಾರತ ಮರೆಯಲು ಸಾಧ್ಯವಿಲ್ಲ. ಅವರ ದೇಹಾಂತ್ಯದ ನಂತರ ಅವರ ಸ್ಮರಣಾರ್ಥವಾಗಿ ಅನೇಕ ಶಿಕ್ಷಣ ಸಂಸ್ಥೆಗಳಿಗೆ, ವೈಜ್ಞಾನಿಕ ಸಂಸ್ಥೆಗಳಿಗೆ ಮತ್ತು ಅನೇಕ ಪ್ರದೇಶಗಳಿಗೆ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ.

ಇಂತಹ ವ್ಯಕ್ತಿತ್ವದ ಹುಟ್ಟುಹಬ್ಬದ ಜತೆಗೆ ವಿಶ್ವ ವಿದ್ಯಾರ್ಥಿಗಳ ದಿನವನ್ನು “ಜನರಿಗೆ ಕಲಿಕೆ, ಗ್ರಹ, ಸಮೃದ್ಧಿ ಮತ್ತು ಶಾಂತಿ” ಎನ್ನುವ ನಿಲುವನ್ನಿಟ್ಟುಕೊಂಡು ಆಚರಿಸಲಾಗುತ್ತಿದೆ. ಈ ವಿಚಾರವು ಮಾನವೀಯ ಉದ್ದೇಶಗಳೊಂದಿಗೆ ನಮ್ಮ ಸಾಮೂಹಿಕತೆಗಾಗಿ ಅಭಿವೃದ್ಧಿ ಮಹತ್ವಾಕಾಂಕ್ಷೆಗಳ ಕೇಂದ್ರತೆಯನ್ನು ಎತ್ತಿ ಹಿಡಿಯುತ್ತದೆ. ಪ್ರಪಂಚದಾದ್ಯಂತ ವಿದ್ಯಾರ್ಥಿಗಳಿಗೆ ಅವರ ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ಕಠೋರ ನಿರ್ಧಾರಗಳನ್ನು ಮನದಟ್ಟಾಗಿಸುವ ನಿಟ್ಟಿನಲ್ಲಿ ಆಚರಿಸಲಾಗುತ್ತಿದೆ.    

ಅವರು ತಮ್ಮ ಜೀವಿತಾವಧಿಯಲ್ಲಿ ಯುವ ಜನತೆಗೆ ಸ್ಪೂರ್ತಿದಾಯಕ ಮಾತುಗಳನ್ನು ಹೇಳುತ್ತಿದ್ದರು. ಅವರ ಮಾತುಗಳು ಇಂದಿಗೂ ಸಹ ಯುವಜನತೆಯನ್ನು ಎಚ್ಚೆತ್ತುಕೊಳ್ಳುವಂತೆ ಮಾಡುತ್ತವೆ.  

Exit mobile version