ಜಲಶಕ್ತಿ ಅಭಿಯಾನ್: ಕ್ಯಾಚ್ ದಿ ರೈನ್ ಅಭಿಯಾನ: ಪ್ರಧಾನಿ ಚಾಲನೆ

ನವದೆಹಲಿ, ಮಾ. 22: ವರ್ಷದಿಂದ ವರ್ಷಕ್ಕೆ ಕಡಿಮೆ ಆಗುತ್ತಿರುವ ಮಳೆ ಮತ್ತು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ನೀರಿನ ಬಳಕೆಯನ್ನು ಮನಗೊಂಡು ಕೇಂದ್ರ ಸರ್ಕಾರ ವಿಶ್ವ ಜಲ ದಿನವಾದ ಇಂದು ‘ಜಲಶಕ್ತಿ ಅಭಿಯಾನ್: ಕ್ಯಾಚ್ ದಿ ರೈನ್’ ಅಭಿಯಾನ ಆರಂಭಿಸಿದೆ. ಈ ಅಭಿಯಾನಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದರು. ಇದೇ ವೇಳೆ ಪ್ರಧಾನ ಮಂತ್ರಿಗಳ ಸಮಕ್ಷಮದಲ್ಲಿ ಅಂತರ್ ನದಿ ಜೋಡಣೆಯ ರಾಷ್ಟ್ರೀಯ ಸಂಭಾವ್ಯ ಮಹಾಯೋಜನೆಯ ಮೊದಲ ಯೋಜನೆಯಾದ ಕೆನ್ ಬೆಟ್ವಾ ನದಿ ಜೋಡಣಾ ಯೋಜನೆಯ ಅನುಷ್ಠಾನದ ಐತಿಹಾಸಿಕ ಒಪ್ಪಂದಕ್ಕೆ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಹಾಗೂ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸಹಿ ಹಾಕಿದರು.

ಜಲಶಕ್ತಿ ಅಭಿಯಾನ್: ಕ್ಯಾಚ್ ದಿ ರೈನ್ ಎಂದರೇನು?
“ಮಳೆ ನೀರನ್ನು ಸಂಗ್ರಹಿಸಿ, ಅದು ಯಾವಾಗ? ಎಲ್ಲಿ ಬೀಳುತ್ತದೋ, ಅಲ್ಲೇ, ಅವಾಗಲೇ ಸಂಗ್ರಹಿಸಿ” (catch the rain, where it falls, when it falls) ಎಂಬ ಘೋಷ ವಾಕ್ಯದೊಂದಿಗೆ ದೇಶಾದ್ಯಂತ ನಗರ ಮತ್ತು ಗ್ರಾಮೀಣ ಪ್ರದೇಶಗಳೆರಡೂ ಕಡೆ ಅಭಿಯಾನ ನಡೆಸಲಾಗುವುದು. ಮುಂಗಾರು ಪೂರ್ವ ಅವಧಿ ಮತ್ತು ಮುಂಗಾರು ಮಳೆ ಅವಧಿ ಸೇರಿ 2021ರ ಮಾರ್ಚ್ 22ರಿಂದ 2021ರ ನವೆಂಬರ್ 30ರವರೆಗೆ ಈ ಅಭಿಯಾನ ನಡೆಯಲಿದೆ. ಈ ಅಭಿಯಾನದಲ್ಲಿ ಸೂಕ್ತ ರೀತಿಯಲ್ಲಿ ಮಳೆ ನೀರು ಸಂಗ್ರಹ ಮಾಡುವುದನ್ನು ಖಾತ್ರಿಪಡಿಸಿಕೊಳ್ಳಲು, ಹವಾಮಾನ ಮತ್ತು ಮಣ್ಣಿನ ಸ್ಥಿತಿಗತಿ ಆಧರಿಸಿ ಅದಕ್ಕೆ ಅನುಗುಣವಾಗಿ ಮಳೆ ನೀರು ಕೊಯ್ಲು ವ್ಯವಸ್ಥೆಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ಎಲ್ಲ ಭಾಗಿದಾರರನ್ನು ಒಗ್ಗೂಡಿಸಲಾಗುವುದು. ಕಾರ್ಯಕ್ರಮದ ನಂತರ ಪ್ರತಿಯೊಂದು ಜಿಲ್ಲೆಯಲ್ಲೂ (ವಿಧಾನಸಭೆ ಚುನಾವಣೆ ನಡೆಯುತ್ತಿರುವ ರಾಜ್ಯಗಳನ್ನು ಹೊರತುಪಡಿಸಿ) ಗ್ರಾಮ ಸಭೆಗಳು ನಡೆಯಲಿದ್ದು, ಅಲ್ಲಿ ನೀರು ಮತ್ತು ಜಲಸಂರಕ್ಷಣೆ ಕುರಿತಂತೆ ಚರ್ಚೆ ನಡೆಸಲಾಗುವುದು. ಗ್ರಾಮ ಸಭೆಗಳು, ನೀರಿನ ಸಂರಕ್ಷಣೆಗೆ ‘ಜಲ ಶಪಥ’ವನ್ನು ಕೈಗೊಳ್ಳಲಿವೆ.

ಏನಿದು ಕೆನ್ ಬೆಟ್ವಾ ಜೋಡಣಾ ಯೋಜನೆ?

ಅಂತರ ನದಿ ಜೋಡಣೆಗಳ ಮೂಲಕ ಹೆಚ್ಚಿನ ನೀರಿರುವ ಪ್ರದೇಶಗಳಿಂದ ಬರಪೀಡಿತ ಮತ್ತು ನೀರಿನ ಕೊರತೆ ಎದುರಿಸುತ್ತಿರುವ ಪ್ರದೇಶಗಳಿಗೆ ನೀರು ಒದಗಿಸುವ ಮಹತ್ವಾಕಾಂಕ್ಷೆಯ ದೃಷ್ಟಿಯಿಂದ ಈ ಒಪ್ಪಂದವು ಅಂತರರಾಜ್ಯ ಸಹಕಾರ ಆರಂಭಕ್ಕೆ ನಾಂದಿ ಹಾಡಲಿದೆ. ಈ ಯೋಜನೆಯಲ್ಲಿ ದೌದಾನ್ ಅಣೆಕಟ್ಟೆ ನಿರ್ಮಾಣದ ಮೂಲಕ ಕೆನ್ ನಿಂದ ಬೆಟ್ವಾ ನದಿಗೆ ನೀರು ಹರಿಸಲಾಗುವುದು. ಇದು ಬಹು ಉದ್ದೇಶದ ಯೋಜನೆ ಆಗಿದ್ದು, ವಾರ್ಷಿಕ 10.62 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಕರ್ಯ ಲಭ್ಯವಾಗಲಿದೆ.‌ 62 ಲಕ್ಷ ಜನರಿಗೆ ಕುಡಿಯುವ ನೀರು ಪೂರೈಕೆಯಾಗಲಿದೆ ಮತ್ತು 103 ಮೆಗಾವ್ಯಾಟ್ ಜಲ ವಿದ್ಯುತ್ ಉತ್ಪಾದನೆಯಾಗಲಿದೆ. ಬುಂಡೇಲ್ ಖಂಡದ ನೀರಿನ ಕೊರತೆ ಎದುರಿಸುತ್ತಿರುವ ಪ್ರದೇಶಗಳಲ್ಲಿ ಅದರಲ್ಲೂ ವಿಶೇಷವಾಗಿ ಮಧ್ಯಪ್ರದೇಶದ ಪನ್ನಾ, ಟಿಕಮ್ ಗರ್, ಛಾತ್ರಾಪುರ್, ಸಾಗರ್, ದಮೋಹ್, ದತಿಯಾ ವಿದಿಶಾ, ಶಿವಪುರಿ ಮತ್ತು ಉತ್ತರ ಪ್ರದೇಶದ ಬಂಡ, ಮಹೋಬಾ, ಝಾನ್ಸಿ ಮತ್ತು ಲಲಿತ್ ಪುರ್ ಗೆ ನೀರು ಒದಗಿಸಲಿದೆ.

Exit mobile version