ಕರುನಾಡ ಸಸಿಗಳನ್ನು ರಾಜಸ್ಥಾನದಲ್ಲಿ ಬೆಳೆಸುತ್ತಿರುವ ಪರಿಸರ ಪ್ರೇಮಿ `ಬೈರವ್ ಸಿಂಗ್’

Bhairav Singh

ಬೈರವ್ ಸಿಂಗ್ (Bhairav singh is a environmentalist): ಕರ್ನಾಟಕದಿಂದ ರಾಜಸ್ಥಾನಕ್ಕೆ ಪ್ರತಿವರ್ಷ ಕೆಲವೊಂದಿಷ್ಟು ಗಿಡ ತೆಗೆದುಕೊಂಡು ಹೋಗಿ, ಕರ್ನಾಟಕದ ಗಿಡಗಳ‌ ನಂಟನ್ನು ರಾಜಸ್ಥಾನದಲ್ಲೂ ಬೆಳಸುವ ಪ್ರಯತ್ನ ಮಾಡುತ್ತಿರುವ ಅಪರೂಪದ ಪರಿಸರ ಪ್ರೇಮಿ.

ಮೊನ್ನೆ ನಮ್ಮ ನರ್ಸರಿಗೆ ಬೈರವ್ ಸಿಂಗ್ ಬಂದಿದ್ದರು. ಇವರು ಹುಟ್ಟಿ ಬೆಳದಿದ್ದೆಲ್ಲಾ ಮೈಸೂರಿನಲ್ಲಿಯಾದರೂ(Mysuru), ಪೂರ್ವಜರ ತವರಾದ ರಾಜಸ್ಥಾನದ ಜೊತೆಗೆ ಇವರು ನಂಟು ಕಡಿದುಕೊಂಡಿಲ್ಲ.

ಆಗಾಗ್ಗೆ ತಮ್ಮೂರಿನ ಕಡೆಗೆ ಹೋಗಿ ಬರುತ್ತಿರುತ್ತಾರೆ. ಇವರು ರಾಜಸ್ಥಾನ(Rajasthan) ಐತಿಹಾಸಿಕ ನಗರವಾದ ಜೋದ್ ಪುರ(Jodhpur) ಮೂಲದವರು.

ಸದ್ಯ ಮೈಸೂರಿನಲ್ಲಿ ವ್ಯಾಪಾರ ಮಾಡಿಕೊಂಡು‌ ಜೀವನ ಮಾಡುತ್ತಿರುವ ಇವರು, ಮಳೆಗಾಲದ ಸಮಯದಲ್ಲಿ ಊರಿನ ಕಡೆ ಹೋಗುವಾಗ ತಪ್ಪದೆ‌ ಮೈಸೂರಿನಿಂದ ಇಲ್ಲಿನ ಕೆಲವೊಂದಿಷ್ಟು‌, ಅವರಿಗೆ ವಿಶೇಷ ಎನಿಸುವ ಗಿಡಗಳನ್ನು ತೆಗೆದುಕೊಂಡು ಹೋಗಿ ಅಲ್ಲಿ ನೆಟ್ಟು‌ ಬೆಳಸುವ ಪ್ರಯತ್ನ ಮಾಡುತ್ತಿದ್ದಾರೆ.

https://vijayatimes.com/miss-india-2022-winner-sini-shetty/

ಮೊನ್ನೆ ಇದೇ ರೀತಿ ನಮ್ಮ ನರ್ಸರಿಗೂ ಬಂದು ಕಾಡು ಬಾದಾಮಿ, ಶ್ರೀಗಂದ, ಬಿಲ್ವಪತ್ರೆ ಸೇರಿ ಐದಾರು ಗಿಡಗಳನ್ನು ತೆಗೆದುಕೊಂಡರು. ನಮ್ಮ ಅರಣ್ಯ ಇಲಾಖೆ ನರ್ಸರಿಗೆ ಬರುವ ಮುನ್ನ ತೋಟಗಾರಿಕೆ ಇಲಾಖೆಯ ನರ್ಸರಿಯಲ್ಲಿ‌ ಕೆಲವು ಹಣ್ಣಿನ ಗಿಡಗಳನ್ನು ತಂದಿದ್ದರು.


ಈ ಸಂಧರ್ಭದಲ್ಲಿ ಇವರ ಪರಿಚಯವಾಗಿ ಲೋಕರೂಡಿಯಾಗಿ ಮಾತನ್ನಾಡುವಾಗ ರಾಜಸ್ಥಾನದ ಅರಣ್ಯ ಹಾಗೂ‌ ವನ್ಯಜೀವಿ ಪ್ರೇಮಿ ಜನಾಂಗವೆಂದು ಹೆಸರಾಗಿರುವ ಬೀಷ್ಣೋಯಿಗಳ ಬಗ್ಗೆ ನಿಮಗೆ ಗೊತ್ತಾ? ಎಂದು ಕೇಳಿದೆ.

“ಹೌದು ಗೊತ್ತು. ಅದೇ ಸಲ್ಮಾನ್ ಖಾನ್ ಗೆ ಕೃಷ್ಣ ಮೃಗ ಬೇಟೆ ಪ್ರಕರಣದಲ್ಲಿ‌ ಶಿಕ್ಷೆ ಆಗೋದಕ್ಕೆ ಕಡೆಯವರೆಗೂ ಹೋರಾಡಿದ್ರಲ್ಲ, ಮತ್ತೆ ಅನಾಥ ವನ್ಯಜೀವಿಗಳಿಗೆ ತಮ್ಮ ಎದೆಹಾಲು ಕುಡಿಸುವ ಪೋಟೋ ಎಲ್ಲಾ ನೋಡಿದಿವಲ್ಲ, ಅವ್ರಲ್ವಾ?” ಅಂದ್ರು. ಅನಂತರ ನಾನು ಮಾತು ಮುಂದುವರೆಸಿ “ಹೌದು ಅವರೆ. ಬೀಷ್ಣೋಯಿ ಜನಾಂಗದವರ ಪರಿಸರ ಹಾಗೂ ವನ್ಯಜೀವಿ ಪ್ರೇಮಕ್ಕೆ ದೊಡ್ಡ ಐತಿಹಾಸಿಕ ಹಿನ್ನೆಲೆ ಇದೆ.‌

Representational Image
1730 ರಲ್ಲಿ ಜೋದಪುರದ ರಾಜ ಅಭಯ್ ಸಿಂಗ್'ನ ಸೈನಿಕರು, ತಮ್ಮ ರಾಜ್ಯದ ಹೊಸ ಅರಮನೆ ನಿರ್ಮಾಣಕ್ಕಾಗಿ ಬೀಷ್ಣೋಯಿಗಳ ಬಾಹುಳ್ಯದ ಕೇಜರ್ಲಿ ಗ್ರಾಮಕ್ಕೆ ಬಂದು ಆ ಭಾಗದ ಅಪರೂಪದ ಮರವಾಗ ಕೇಜ್ರಿ ಮರ (Prosopis cineraria) ಗಳನ್ನು ಕಡಿಯಲು ಮುಂದಾಗುತ್ತಾರೆ. ಆಗ ಅವುಗಳನ್ನು ಕಡಿಯದಂತೆ ಬೀಷ್ಣೋಯಿಗಳು, ಸೈನಿಕರಿಗೆ ಪ್ರತಿರೋಧ ತೋರುತ್ತಾರೆ‌. ಇದರಿಂದ ಕೆರಳಿದ ರಾಜನ ಸೈನಿಕರು ಮಹಿಳೆ ಮಕ್ಕಳು ಸೇರಿದಂತೆ ಒಟ್ಟು 363 ಜನರನ್ನು ಹತ್ಯೆ ಮಾಡುತ್ತಾರೆ. 

ಈ ಘಟನೆ ನಡೆದ ದಿನವಾದ ಸೆಪ್ಟೆಂಬರ್ 10ನ್ನು ಭಾರತದಾದ್ಯಂತ ‘ಅರಣ್ಯ ಹುತಾತ್ಮರ ದಿನ’ ಎಂದು ಆಚರಿಸಲಾಗುತ್ತಿದ್ದು, ಬೀಷ್ಣೋಯಿಗಳನ್ನು ಸೇರಿ ಅರಣ್ಯ ಹಾಗೂ ವನ್ಯಜೀವಿ ಸಂರಕ್ಷಣೆಗಾಗಿ ಹೋರಾಡಿ ಹುತಾತ್ಮರಾದ ಎಲ್ಲರನ್ನು ಆ ದಿನ ಸ್ಮರಿಸಲಾಗುತ್ತದೆ.” ಎಂದು ಬೀಷ್ಣೋಯಿಗಳ ಕುರಿತಾದ ವಿವರಗಳನ್ನು ಅವರಿಗೆ ತಿಳಿಸಿದೆ.
ಅವರಿಗೆ ಕೇಜ್ರಿ ಮರಗಳ ಬಗ್ಗೆ ಹೇಳಿದಾಗ ಅವುಗಳ ಪೋಟೋವನ್ನು ತೋರಿಸಿದಾಗ ಆಗಲೇ ರಾಜಸ್ಥಾನದಲ್ಲಿದ್ದ ಅವರ ತಂದೆಗೆ ಕರೆ ಮಾಡಿ ಕೇಜ್ರಿ ಮರಗಳ ಕುರಿತು ಕೇಳಿದರು.

ನನ್ನ ಬಳಿಯೂ ಅವರ ಜೊತೆ ಮಾತನ್ನಾಡಿಸಿದರು. ಕೇಜ್ರಿ ಮರದ ಬಗ್ಗೆ ಸ್ವಲ್ಪ ವಿವರಣೆ ಹೇಳಿದಾಕ್ಷಣ ಅವರ ತಂದೆ ಮರವನ್ನು ಗುರುತಿಸಿದರು. ಸಾಧ್ಯವಾದರೆ ಆ ಮರದ ಒಂದೆರಡು‌ ಸಸಿ ಅಥವಾ ಒಂದಷ್ಟು ಬೀಜಗಳನ್ನು ಸಂಗ್ರಹಿಸಿ ಕೊಡಿ ಎಂದು ಹೇಳಿದೆ.

ಖಂಡಿತಾ ಸಂಗ್ರಹಿಸಿ ಕೊಡುತ್ತೇನೆ ಎಂದು ಅವರು ಹೇಳಿದರು. ಹೀಗೆ ಬೈರವ್ ಸಿಂಗ್’ರವರ ಪರಿಚಯ ಕೇಜ್ರಿ ಮರವನ್ನು ನಮ್ಮಲ್ಲಿ ಬೆಳಸಿ ಪರಿಚಯಿಸುವ ಪ್ರಯತ್ನಕ್ಕೆ ಕಾರಣವಾಯಿತು.
Exit mobile version