ಪಣಜಿ ಸೆ 22 : 2022ರ ಚುನಾವಣಾ ದೃಷ್ಠಿಯಿಂದ ಅರವಿಂದ್ ಕೇಜ್ರಿವಾಲ್ ಗೋವಾ ಜನತೆಗೆ ಭರವಸೆಯ ಮಹಾಪೂರವನ್ನೇ ಹರಿಸಿದ್ದಾರೆ. ಮುಂಬರುವ 2022ರ ಗೋವಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವನ್ನು ಗೆಲ್ಲಿಸಿದರೆ, ಸ್ಥಳೀಯರಿಗೆ ಶೇ.80ರಷ್ಟು ಉದ್ಯೋಗವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಗೋವಾದಲ್ಲಿ ಸರ್ಕಾರಿ ಉದ್ಯೋಗ ರಾಜಕಾರಣಿಗಳ ಸಂಬಂಧಿಗಳಿಗೆ ಮೀಸಲಾಗಿದೆ. ಸಾಮಾನ್ಯ ಯುವಕರು ಇಲ್ಲಿ ಸರ್ಕಾರ ನೌಕರಿ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿದರು.
ಗೋವಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವನ್ನು ಗೆಲ್ಲಿಸಿದರೆ ಗೋವಾದಲ್ಲಿ ಪ್ರತಿ ಕುಟುಂಬದಿಂದ ಕನಿಷ್ಠ ಒಬ್ಬ ನಿರುದ್ಯೋಗಿಗೆ ಸರ್ಕಾರಿ ಉದ್ಯೋಗ ನೀಡಲಾಗುವುದು ಮತ್ತು ಉದ್ಯೋಗವಿಲ್ಲದ ಯುವಕರಿಗೆ ಉದ್ಯೋಗ ದೊರೆಯುವವರೆಗೆ ಮಾಸಿಕ 3,000 ರೂ. ನೀಡಲಾಗುವುದು. ಜೊತೆಗೆ ಕೊರನಾ ಹಿನ್ನಲೆಯಲ್ಲಿ ನಷ್ಟ ಅನುಭವಿಸುತ್ತಿರುವ ಗಣಿಗಾರಿಕೆ ಮತ್ತು ಪ್ರವಾಸೋದ್ಯಮ ಉದ್ಯಮಗಳು ಸಾಮಾನ್ಯ ಸ್ಥಿತಿಗೆ ಬರುವವರೆಗೆ ಇದರಿಂದಲೇ ಜೀವನ ಸಾಗಿಸುತ್ತಿರುವ ಕುಟುಂಬಗಳಿಗೆ ತಿಂಗಳಿ 5,000 ರೂ. ಪ್ರೋತ್ಸಾಹಧನ ನೀಡಲಾಗುವುದು ಎಂದು ಕೇಜ್ರಿವಾಲ್ ಅವರು ಭರವಸೆ ನೀಡಿದ್ದಾರೆ.