ಬೆಲೆ ಏರಿಕೆ ಪಟ್ಟಿ ಓದಿದರೆ ಎದೆ ನಡುಗುತ್ತದೆ ; ಗೃಹಜ್ಯೋತಿ ಈಗ ಸುಡುಜ್ಯೋತಿ, ನಿದಿರೆಗೆ ಜಾರಿದೆ ಯುವನಿಧಿ ಎಂದು ಕಾಂಗ್ರೆಸ್‌ ವಿರುದ್ಧ ಎಚ್‌ಡಿ ಕುಮಾರಸ್ವಾಮಿ ಆಕ್ರೋಶ

ಬೆಂಗಳೂರು : ಏರುತ್ತಿರುವ ಬೆಲೆಗಳನ್ನು ಕಡಿಮೆ ಮಾಡಲು ಕಾಂಗ್ರೆಸ್ ನಾಯಕರು ಸುಳ್ಳು ಹೇಳಿದ್ದು ಸಾಕು, ಏರಿದ ಬೆಲೆ ಕಡಿತಕ್ಕೆ ಇನ್ನಾದರೂ ಕ್ರಮ (HDKumaraswamy against price rise) ಕೈಗೊಳ್ಳಲಿ.

ಇಲ್ಲವಾದಲ್ಲಿ ನೀವು ರಾಜ್ಯದ ನಾರಿಶಕ್ತಿ ಆಕ್ರೋಶಕ್ಕೆ ನಾಮಾವಶೇಷ ಇಲ್ಲದಂತೆ ಹೋಗುತ್ತೀರಿ. ಎಚ್ಚರ ಎಂದು ಕಾಂಗ್ರೆಸ್‌ (Congress) ಸರ್ಕಾರದ ವಿರುದ್ಧ ಮಾಜಿ ಸಿಎಂ

ಎಚ್‌ಡಿ ಕುಮಾರಸ್ವಾಮಿ (H.D Kumaraswamy) ಕಿಡಿಕಾರಿದ್ದಾರೆ.

ಬೆಲೆ ಏರಿಕೆ ಕುರಿತು ಸರಣಿ ಟ್ವೀಟ್(Tweet) ಮಾಡಿ ಅವರು ಕಾಂಗ್ರೆಸ್‌ ಸರ್ಕಾರವು 5 ಗ್ಯಾರಂಟಿಗಳಿಂದ ಜನೋದ್ಧಾರ ಗ್ಯಾರಂಟಿ ಎಂದು ಹಸಿ ಸುಳ್ಳು ಹೇಳಿತ್ತು ಈಗ ಬರಗೆಟ್ಟ ಈ ಹೊತ್ತಿನಲ್ಲಿ ಅಂಬರದ

ಮೇಲೆ ಕೂತು ಸ್ವಯಂವರ ಮಾಡಿಕೊಳ್ಳುತ್ತಿರುವ ಮತಿಗೆಟ್ಟ ವರನಂತೆ ವರ್ತಿಸುತ್ತಿದೆ.ಜನರು ಬೆಲೆ ಏರಿಕೆ ಹೊಡೆತಕ್ಕೆ ತತ್ತರಿಸುತ್ತಿರುವುದು ಅದರ ಕಣ್ಣಿಗೆ ಕಾಣುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ರಾಜ್ಯದಲ್ಲಿ ಕಾಫಿ, ಟೀ, ತಿಂಡಿ, ಊಟದ ದರ ಹೆಚ್ಚಳ : ಅಕ್ಕಿ ಮತ್ತು ಹಾಲಿನ ದರ ಹೆಚ್ಚಳ ಬಗ್ಗೆಯೂ ಸಿಕ್ಕಿದೆ ಸುಳಿವು

ಈ ಸರ್ಕಾರ ನನಗೂ ಉಚಿತ, ನಿನಗೂ ಉಚಿತ ಎಂದು ಗ್ಯಾರಂಟಿ ಜಾಗಟೆ ಹೊಡೆಯಿತು ಆದರೆ ಮಾರುಕಟ್ಟೆಯಲ್ಲಿ ಗಗನಮುಖಿಯಾದ ಆಹಾರ ಪದಾರ್ಥಗಳ ಬೆಲೆ ಮೇಲೆ ಯಾವುದೇ ನಿಯಂತ್ರಣವೇ ಇಲ್ಲ.

ಕೃಷಿ ಉತ್ಪನ್ನ ಮಾರುಕಟ್ಟೆ ಇಲಾಖೆಗಳು ಮತ್ತು ಆಹಾರ ಮತ್ತು ನಾಗರಿಕ ಪೂರೈಕೆ ಜನರ ಕಣ್ಣೀರಿನಲ್ಲಿ ಗೆಣಸು ಬೇಯಿಸಿಕೊಳ್ಳುತ್ತಿವೆ. ಬೆಲೆ ಇಳಿಕೆ ಬಗ್ಗೆ ಅವರಿಗೆ ಚಿಂತನೆಯೇ ಇಲ್ಲ ಎಂದು ಕಿಡಿಕಾರಿದ್ದಾರೆ.

ಈ ಸರ್ಕಾರ ಬಂದು ತಿಂಗಳ ಮೇಲಾಯಿತು ಆದರೂ ಇನ್ನೊಬ್ಬರ ಮೇಲೆ ಗೂಬೆ ಕೂರಿಸುತ್ತಲೇ ಇದೆ. ವರ್ಗಾವಣೆ ದಂಧೆಯ ದಾಸ್ಯಕ್ಕೆ ಅಧಿಕಾರ ಸಿಕ್ಕ ಕೂಡಲೇ ಬಿದ್ದ ಸರಕಾರಕ್ಕೆ ಆಹಾರ ಪದಾರ್ಥಗಳ ದುಬಾರಿ ಬಗ್ಗೆ,

ಮಾರುಕಟ್ಟೆಯಲ್ಲಿ ಹೆಚ್ಚುತ್ತಲೇ ಹೋಗುತ್ತಿರುವ ಬೆಲೆಗಳ ಬಗ್ಗೆ ಗಮನ ಹೋಗಲೇ ಇಲ್ಲ. ಬೆಲೆ ಏರಿಕೆ ಪಟ್ಟಿಯನ್ನು ಓದಿದರೆ ಎದೆ ನಡುಗುತ್ತದೆ.ಕೆಜಿ ಟೊಮ್ಯಾಟೋ ಬೆಲೆ 100 ರೂ. ಮುಟ್ಟಿದೆ ಇನ್ನು ಅಕ್ಕಿ ಬೆಲೆ

ಕೆಜಿಗೆ ಸರಾಸರಿ 20 ರೂ. ಏರಿದೆ. ಈ ಏರಿಕೆ ಲಾಭ ಇತ್ತ ಗ್ರಾಹಕನಿಗೂ ಇಲ್ಲ ಅತ್ತ ರೈತನಿಗೂ ಇಲ್ಲ. ಈ ಬೆಲೆ ಬೆಂಕಿಯಲ್ಲಿ ಜನ ಬೇಯುತ್ತಿದ್ದರೆ ಆ ಬೇಗೆಯಲ್ಲಿ ಈ ಸರ್ಕಾರ ಚಳಿ ಕಾಯಿಸಿಕೊಳ್ಳುತ್ತಿದೆ ಎಂದಿದ್ದಾರೆ.

ಕಾಂಗ್ರೆಸ್‌ ತಾನು ಕೊಟ್ಟ ಭರವಸೆಗಳ ಬಗ್ಗೆ ಉತ್ತರ ಹೇಳಲಿ?

ಚುನಾವಣಾ ಸಂದರ್ಭಗಳಲ್ಲಿ ಬೆಲೆಗಳ ಇಳಿಕೆಯ ಬಗ್ಗೆ ಈ ಹಿಂದೆ ಹೇಳಿದ್ದೆಲ್ಲ ಎಲ್ಲಿ ಹೋಯಿತು? ಮತ ಪಡೆದ ಮೇಲೆ ಇದೆಲ್ಲವನ್ನು ಮರೆತು ಹೋದಿರಾ ? ಪ್ರಣಾಳಿಕೆ ಪುಸ್ತಕಕ್ಕೆ 135 ಸೀಟು ಸಿಕ್ಕಿದ ಮೇಲೆ ಮೂವತ್ತೇ

ದಿನದಲ್ಲಿ ಗೆದ್ದಲು ಹಿಡಿಯಿತಾ? ನುಡಿದಂತೆ ನಡೆದಿದ್ದೇವೆ ಎಂದು ಹೇಳಿದ್ದೀರಿ ನುಡಿದಂತೆ ಎಲ್ಲಿ ನಡೆದಿದ್ದೀರಿ? ನುಡಿದಂತೆ ನಡೆದಿದ್ದೇವೆ ಎಂದರೆ ಬೆಲೆಗಳನ್ನು ಲಂಗೂ ಲಗಾಮು ಇಲ್ಲದೆ ಆಕಾಶಕ್ಕೆ ಜಿಗಿಸುವುದಾ?

ಅಥವಾ ಮಾರುಕಟ್ಟೆಯ ದಲ್ಲಾಳಿಗಳಿಗೆ ಶಕ್ತಿ ತುಂಬುವುದಾ? ಮಹಿಳೆಯರ ಗಮನ ಶಕ್ತಿ ಯೋಜನೆ ಮೂಲಕ ಬೇರೆಡೆಗೆ ಸೆಳೆದು, ಅವರ ಅಡುಗೆ ಮನೆ ಬಜೆಟ್‌ಗೆ ಈಗ ಕೊಳ್ಳಿ ಇಡುವುದಾ?

ಎಂದು ಎಚ್‌ಡಿ ಕುಮಾರಸ್ವಾಮಿ (HDKumaraswamy against price rise) ಪ್ರಶ್ನಿಸಿದ್ದಾರೆ.

ಇನ್ನು ಎಚ್‌ಡಿ ಕುಮಾರಸ್ವಾಮಿ ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳ ಬಗ್ಗೆಯೂ ವ್ಯಂಗ್ಯ ಮಾಡಿ ಹೊಸ ಹೆಸರುಗಳನ್ನು ನೀಡಿದ್ದಾರೆ.

ಬೆಲೆ ಏರಿಕೆ ಕನಸು ನನಸು! ಅಕ್ಕಿಭಾಗ್ಯ ಹಗಲು ಕನಸು,
ಶಕ್ತಿ ಯೋಜನೆಯಿಂದ ಸಾರಿಗೆ ವ್ಯವಸ್ಥೆಯಲ್ಲಿ ಅರಾಜಕತೆ!!!ಗೃಹಜ್ಯೋತಿ ಈಗ ಸುಡುಜ್ಯೋತಿ!!
ನಿದಿರೆಗೆ ಜಾರಿದೆ ಯುವನಿಧಿ!!!!
ಗೃಹಲಕ್ಷ್ಮಿಗೆ ಗ್ರಹಣ!!!!
ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

ರಶ್ಮಿತಾ ಅನೀಶ್

Exit mobile version