ಹೆತ್ತವರು, ಸಮಾಜ ತಿರಸ್ಕರಿಸಿದರು ಛಲ ಬಿಡದೆ ಓದಿ ಅನಾಥರನ್ನು ಸಲಹುತ್ತಿರುವ ತೃತೀಯಲಿಂಗಿ ಡಾ. ನಕ್ಷತ್ರ!

Bengaluru : ಸಮಾಜದ ಕಣ್ಣು, ದೃಷ್ಟಿಕೋನಗಳು ಇಂದಿಗೂ ಬದಲಾಗದೇ ಹಾಗೆಯೇ (Inspiring Transgender Dr.Nakshatra) ಉಳಿದಿರುವುದು ಮನುಷ್ಯ ಲೋಕಕ್ಕೆ ಎದುರಾದ ಮಹಾ ದುರಂತ ಅಥವಾ ವಿಮೋಚನೆಗೊಳ್ಳದ ಶಾಪವೆಂದೇ ಹೇಳಬಹುದು!

ಮಾನವನ ಸಂಕುಲದಲ್ಲಿ ಗಂಡು, ಹೆಣ್ಣು ಎಂಬುದು ಹೇಗೆ ನಿರ್ಧರಿತವೋ ಹಾಗೆ ತೃತೀಯಲಿಂಗಿ(Inspiring Transgender Dr.Nakshatra) ಎಂಬುದು ಕೂಡ ನಿರ್ಧರಿತ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಅಷ್ಟಕ್ಕೂ ಈ ಪೀಠಿಕೆ ಯಾಕೆ? ನೇರವಾಗಿ ಡಾ.ನಕ್ಷತ್ರ ಯಾರು?

ಈ ತೃತೀಯಲಿಂಗಿಯ ಸಾಧನೆ ಏನು? ಎಂಬುದರ ಬಗ್ಗೆ ವಿವರ ನೀಡಬಹುದಲ್ವಾ ಎಂಬ ನಿಮ್ಮ ಪ್ರಶ್ನೆಗೆ ನನ್ನ ಉತ್ತರ, “ಈ ಪೀಠಿಕೆ ಖಂಡಿತ ಅಗತ್ಯವಿದೆ”.

ಹೌದು, ಸಮಾಜದ ದೃಷ್ಟಿ, ನಮಗೆ ನಾವೇ ಹಿಡಿದ ಕನ್ನಡಿಯೇ ಹೊರೆತು ಬೇರಾರು ತೋರಿಸುವಂತದಲ್ಲ ಎಂಬುದಕ್ಕೆ ನಮ್ಮ ರಾಜ್ಯದ ತೃತೀಯಲಿಂಗಿ ಸಾಧಕಿ ಡಾ.ನಕ್ಷತ್ರ ಅವರ ಕಥೆಯೇ ಅದ್ಭುತ ನಿದರ್ಶನ.

ಇದನ್ನೂ ಓದಿ : https://vijayatimes.com/2-marriage-law-in-africa/

ಒಂದು ಪ್ರತಿಷ್ಠಿತ ಕುಟುಂಬದಲ್ಲಿ ಜನಿಸಿದ ನಕ್ಷತ್ರ ತಾವು ಎಲ್ಲರಂತೆ ಎಂದುಕೊಂಡವರು, ತಂದೆ ಪೊಲೀಸ್ ಇಲಾಖೆಯಲ್ಲಿ ಉನ್ನತ ಸ್ಥಾನದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

ಹೇಳಲು ದೊಡ್ಡ ಕುಟುಂಬವಿದ್ದರೂ ಸಹ ಆ ದೊಡ್ಡ ಕುಟುಂಬಕ್ಕೆ ಚಿಕ್ಕ ಮನಸ್ಥಿತಿ ದೊರೆತಿದ್ದು ನಕ್ಷತ್ರ ಅವರ ಜೀವನಕ್ಕೆ ಮುಳುವಾಯಿತು.

“ಎಲ್ಲರಂತೆ ಬೆಳೆಯುವಾಗ ನನ್ನ ದೇಹದಲ್ಲಿ ಆದ ಬೆಳವಣಿಗೆ ಬಗ್ಗೆ ನನ್ನ ಹೆತ್ತವರಿಗೆ ತಿಳಿಸಿದಾಗ, ಅವರು ಹಿಂದೆ-ಮುಂದೆ ಯೋಚಿಸದೆ ಮನೆಯಿಂದ ಹೊರ ಹೋಗು ಎಂದು ಹೇಳಿದರು.

ಆಗ ನನ್ನ ವಯಸ್ಸು 15 ವರ್ಷ” ಎಂದು ಸ್ವತಃ ನಕ್ಷತ್ರ ಅವರೇ ಹೇಳಿಕೊಂಡಿದ್ದಾರೆ.

ಒಂದು ಸಂದರ್ಶನದಲ್ಲಿ(Interview) ಈ ಬಗ್ಗೆ ಮನಬಿಚ್ಚಿ ಮಾತನಾಡಿರುವ ಡಾ.ನಕ್ಷತ್ರ ಅವರು ಹಂಚಿಕೊಂಡಿರುವ ಸಂಗತಿ ಹೀಗಿದೆ, ನನ್ನ ದೇಹದಲ್ಲಿ ಬದಲಾವಣೆ ಕಂಡರು ನಾನು ಸ್ತೀಲಿಂಗವನ್ನೇ ಹೊಂದಿದ್ದೆ.

ಯಾವಾಗ ನನ್ನ ಮನೆಯವರು ನನ್ನ ಬೇಡವೆಂದರೋ, ಆಗ ನಾನು ಮನೆಯಿಂದ ಹೊರಬರಲು ನಿರ್ಧರಿಸಿದೆ.

ಆಗ ನನ್ನ ವಯಸ್ಸು 16! ನಾನು ನಮ್ಮ ತಂದೆ-ತಾಯಿಗೆ ಸುಳ್ಳು ಹೇಳಬಾರದು ಎಂದು ಸತ್ಯವನ್ನು ಬಿಚ್ಚಿಟ್ಟೆ ಆದ್ರೆ, ಅದೇ ನನಗೆ ಮುಳುವಾಯಿತು.

ಅವರು ನನ್ನನ್ನು ಸ್ವೀಕರಿಸಲಿಲ್ಲ, ಮನೆಯಿಂದ ಹೊರ ನೂಕಿದರು. ನಾನು ಹುಟ್ಟಿದ್ದು ಕಲಬುರ್ಗಿ(ಗುಲ್ಬರ್ಗಾ) ಜಿಲ್ಲೆಯಲ್ಲಿ, ಮನೆಯಿಂದ ಹೊರಬಂದ ಮೇಲೆ ನನಗೆ ಏನು ಮಾಡಬೇಕೋ ತಿಳಿಯಲಿಲ್ಲ.

ಇದನ್ನೂ ಓದಿ : https://vijayatimes.com/5-years-rigorous-imprisonment/

ರಾಜ್ಯದ ಎಷ್ಟೋ ಬೀದಿಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ತಿಂಗಳುಗಟ್ಟಲ್ಲೇ ಭಿಕ್ಷಾಟನೆ ಮಾಡಿದೆ. ಬೆಂಗಳೂರಿಗೆ(Bengaluru) ಬಂದಾಗ ಬಹಳ ಕಷ್ಟಕರವಾಗಿತ್ತು!

ಬೆಳಗ್ಗೆ ಭಿಕ್ಷೆ ಬೇಡಿ ರಾತ್ರಿ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 6 ತಿಂಗಳ ಕಾಲ ಮಲಗಿ ಜೀವನ ಮಾಡಿದೆ.

ಈ ವೇಳೆ ತೃತೀಯಲಿಂಗಿ ಸಮುದಾಯದವರು ನನ್ನನ್ನು ಗುರುತಿಸಿ ರಕ್ಷಣೆ ನೀಡಿದರು. ನನಗೆ ಓದುವ ಹಂಬಲವಿತ್ತು, ಓದಿ ವಿದ್ಯಾವಂತೆ ಆಗಬೇಕು ಎಂಬ ಹಠವಿತ್ತು,

ಹೀಗಾಗಿ ಬೆಂಗಳೂರಿನಲ್ಲೇ ಭಿಕ್ಷೆ ಬೇಡುವುದರ ಜೊತೆಗೆ ಲೈಂಗಿಕ ಕೆಲಸದ ಮುಖೇನ ಹಣ ಸಂಪಾದಿಸುವುದನ್ನು ಮುಂದುವರೆಸಿದೆ.

Image Credits : Banglore Mirror

ಈ ಕೆಲಸಗಳನ್ನು ಮಾಡುತ್ತ ಕೂಡಿಟ್ಟ ಒಂದಿಷ್ಟು ಹಣವನ್ನು, ದೆಹಲಿಗೆ ತೆರಳಿ ಮೆಕ್ಯಾನಿಕಲ್ ಇಂಜಿನಿಯರಿಂಗ್ನಲ್ಲಿ(Mechanical Engineering) ನನ್ನ ಪದವಿ ಮುಗಿಸಲು ಬಳಸಿಕೊಂಡೆ.

ನನ್ನ ಬಿಟೆಕ್(B.Tech) ಪದವಿಯನ್ನು ಮುಗಿಸಿಕೊಂಡ ಬಳಿಕ ನಾನು ಸಮಯವನ್ನು ವ್ಯರ್ಥ ಮಾಡಲಿಲ್ಲ.

ಪದವಿ ಮುಗಿಸಿ ಬೆಂಗಳೂರಿಗೆ ವಾಪಾಸ್ ಮರಳಿದೆ, ನನ್ನಂತೆ ಇರುವ ಅನೇಕ ನಿರಾಶ್ರಿತರನ್ನು ಒಟ್ಟುಗೂಡಿಸಿ ನೋಡಿಕೊಳ್ಳಬೇಕು ಎಂಬ ಮಹತ್ವದ ಉದ್ದೇಶ ನನ್ನಲ್ಲಿತ್ತು.

ಹೀಗಾಗಿ ಸ್ಥಳೀಯ ನಾಗರಿಕ ಸಂಸ್ಥೆಯೊಂದಿಗೆ ಸ್ವಯಂಸೇವಕಿಯಾಗಿ ಕಾರ್ಯನಿರ್ವಹಿಸಿದೆ. ಒಂದನ್ನು ಮಾತ್ರ ನಾನು ದೃಢವಾಗಿ ನಿರ್ಧರಿಸಿದ್ದೆ,

ಇದನ್ನೂ ಓದಿ : https://vijayatimes.com/central-govt-to-supremecourt/

ಈ ಸಮಾಜದಲ್ಲಿ ಗೌರವವನ್ನು ಗಳಿಸಿ, ಘನತೆಯಿಂದ ಜೀವನ ನಡೆಸಬೇಕು ಎಂಬುದನ್ನು. ಒಂದು ದಿನ ಹೀಗೆ ರಸ್ತೆಯಲ್ಲಿ ಸಾಗುವಾಗ ನನ್ನಂತೆ ಕೆಲ ಅನಾಥರನ್ನು(Orphans) ಕಂಡೆ,

ಆಗ ಅವರೊಡನೆ ಕುಳಿತು ಒಂದಿಷ್ಟು ವಿಚಾರವನ್ನು ಚರ್ಚಿಸಿದ ಬಳಿಕ ಈ ವರ್ಗದವರಿಗೆ ಏನಾದರೂ ಸಹಾಯ ಮಾಡಬೇಕು ಎಂದು ನಿರ್ಧರಿಸಿದೆ.

2019 ರಲ್ಲಿ ನನ್ನಂತೆ ಇರುವ ನನ್ನ ನಾಲ್ವರು ಸ್ನೇಹಿತರಾದ ಸಿಲ್ಕ್, ರೇಷ್ಮಾ, ಮಿಲನಾ ಮತ್ತು ಸೌಂದರ್ಯ ಸೇರಿ ಅನಾಥ ಮಕ್ಕಳು, ನಿರಾಶ್ರಿತರಿಗೆ ಆಶ್ರಯ ನೀಡಲು ಮುಂದಾದೆವು.

ನನ್ನ ಸ್ನೇಹಿತರ ಒಪ್ಪಿಗೆಯ ಬಳಿಕ ನಾವು ಅನಾಥರಿಗೆ ಆಶ್ರಯ ನೀಡಲೆಂದು “ನಮ್ಮನೆ ಸುಮ್ಮನೆ”(Nammane Summane) ಎಂಬ ಎನ್‌.ಜಿ.ಒ ಅನ್ನು ಸ್ಥಾಪಿಸಿದೆವು.

ಈ ನಮ್ಮನೆ-ಸುಮ್ಮನೆಯಲ್ಲಿ ನಿರ್ಗತಿಕರು, ನಿರಾಶ್ರಿತರು, ಹೆಚ್.ಐವಿ ರೋಗಿಗಳು ಆಶ್ರಯ ಪಡೆದಿದ್ದಾರೆ. ಈ ಒಂದು ಆಶ್ರಮ ನಿರ್ಮಿಸಿಲು ನಾನು ನನ್ನ ಚಿನ್ನಾಭರಣಗಳನ್ನು ಕೂಡ ಅಡವಿಟ್ಟೆ.

ನಾನು ಅನಾಥವಾದೆ, ಆ ನೋವು ಏನು ಎಂಬುದು ನನಗೆ ತಿಳಿದಿದೆ. ಆದ್ರೆ, ಆ ಕಷ್ಟ ಬೇರಾರು ಅನುಭವಿಸಬಾರದು ಎಂಬುದೇ ನನ್ನ ಉದ್ದೇಶವಾಗಿತ್ತು.

ಈ ಕಾರಣದಿಂದಲೇ “ನಮ್ಮನೆ ಸುಮ್ಮನೆ” ಎಂಬ ಎನ್.ಜಿಓ(NGO) ಅನ್ನು ಪ್ರಾರಂಭಿಸಿದ್ದೇವೆ. ಗಂಗೊಂಡನಹಳ್ಳಿಯಲ್ಲಿ ನಿರಾಶ್ರಿತರಿಗೆ ಎಂದೇ ಮೂರು ಅಂತಸ್ತಿನ ಜಾಗವನ್ನು ಪಡೆದು ಈ ಎನ್.ಜಿಓ ನಡೆಸುತ್ತಿದ್ದೇವೆ.

ಇಲ್ಲಿರುವ ಜನರಿಗೆ ದಿನಕ್ಕೆ ಮೂರೊತ್ತು ಆಹಾರ, ಮಕ್ಕಳಿಗೆ ಪ್ರತ್ಯೇಕ ಹಾಸಿಗೆಗಳು, ಸಮಾಲೋಚನೆ ಮತ್ತು ಶಿಕ್ಷಣವನ್ನು ನೀಡಲಾಗುತ್ತದೆ.

https://fb.watch/h5mrL38_Hf/ ಬೆಂಗಳೂರು : ಕೋಣನಕುಂಟೆ ಕ್ರಾಸ್ ನಲ್ಲಿ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಗೆ ಮನಬಂದಂತೆ ಅವಮಾನಿಸಿದ ವ್ಯಕ್ತಿ!

ಗಂಡು ಮತ್ತು ಹೆಣ್ಣಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಕೋವಿಡ್ ಸಮಯದಲ್ಲಿ ಅನೇಕರು ನನಗೆ ಪರಿಚಯರಾದರು, ಅವರಲ್ಲಿ ನಿರಾಶ್ರಿತರೇ ಹೆಚ್ಚಾಗಿದ್ದರು. ಅವರನ್ನು ನಮ್ಮ ಆಶ್ರಮಕ್ಕೆ ಸೇರಿಸಿಕೊಂಡೆವು.

ನಾನು ಸೇರಿದಂತೆ ನನ್ನ ಉಳಿದ ಸ್ನೇಹಿತರು ದುಡಿಯುವ ಹಣದಿಂದ ಹಾಗೂ ದಾನಿಗಳು ನೀಡುತ್ತಿರುವ ನೆರವಿನಿಂದ ನಮ್ಮನೆ ಸುಮ್ಮನೆ ನಡೆಯುತ್ತಿದೆ.

ನಾನು ಗೌರವದಿಂದ ಬದಕುವ ಮತ್ತು ಸಾಮಾಜಿಕ ಉದ್ದೇಶಕ್ಕೆ ಕೊಡುಗೆ ನೀಡುವ ಕಲ್ಪನೆ ಮೂಲಕ ಶ್ರಮಿಸುತ್ತಿದ್ದೇನೆ. ನಮ್ಮ ಎನ್.ಜಿಓ ನಡೆಸಲು ಇಂದಿಗೂ ಕೂಡ ಕಷ್ಟವಾಗುತ್ತಿದೆ. ಆದರು ಕೂಡ ಹಠ ಬಿಡದೆ ಶ್ರಮಿಸುತ್ತಿದ್ದೇನೆ. ನಮಗೆ ಹಣದ ಅಭಾವ ತುಂಬ ಕಾಡುತ್ತಿದೆ.

ನಮ್ಮ ಎನ್.ಜಿಓ ನಡೆಸಲು ತಿಂಗಳಿಗೆ 50,000 ರೂ.ಕ್ಕೂ ಹೆಚ್ಚು ವೆಚ್ಚ ತಗಲುವುದರಿಂದ ನಾವು ಪ್ರತಿಬಾರಿ ಹಣಕ್ಕೆ ಹೆಣಗಾಡುವಂತ ಪರಿಸ್ಥಿತಿ ಎದುರಾಗುತ್ತಿದೆ.

ಜನರಿಗೆ ನಾವು ಮಾಡುತ್ತಿರುವ ಸೇವೆ ನಿಸ್ವಾರ್ಥ ಎಂದು ಅನಿಸಿದ್ರೆ ನಮ್ಮ ಉದ್ದೇಶಕ್ಕೆ ಹಣದ ಸಹಾಯ ಅಥವಾ ಕೊಡುಗೆಗಳನ್ನು ನೀಡಿದರೆ ಮತ್ತಷ್ಟು ಸಹಾಯವಾಗುತ್ತದೆ” ಎಂದು ಡಾ.ನಕ್ಷತ್ರ ಹೇಳಿದ್ದಾರೆ.

ಹೆತ್ತವರು ಹಾಗೂ ಸಮಾಜ ನಕ್ಷತ್ರವನ್ನು ದೂರವಿಟ್ಟರು ಬೇಸರಗೊಳ್ಳದೆ, ಅದೇ ಸಮಾಜ ಕಡೆಗಣಿಸಿದವರನ್ನು ಇವರು ಸಲಹುತ್ತಿದ್ದಾರೆ ಎಂಬುದು ಗಮನಾರ್ಹ, ಪ್ರಶಂಸನೀಯ! ತೃತೀಯಲಿಂಗಿ ಕೂಡ ಎಲ್ಲರಂತೆ ಒಬ್ಬರು, ಸಮಾಜದಲ್ಲಿ ಅವರಿಗೂ ಬದುಕುವ ಸಮಾನ ಹಕ್ಕಿದೆ ಎಂಬುದನ್ನು ತಮ್ಮ ಕೆಲಸಗಳಿಂದಲೇ ನಕ್ಷತ್ರ ಉತ್ತರಿಸಿದ್ದಾರೆ ಹಾಗೂ ಅರ್ಥೈಸಿದ್ದಾರೆ.

ಇದನ್ನೂ ಓದಿ : https://vijayatimes.com/kashmir-files-controversy/

ಈಗಲಾದ್ರೂ ಸಮಾಜ ತನ್ನ ದೃಷ್ಟಿಕೋನವನ್ನು ಬದಲಾಯಿಸಿದ್ರೆ ಬಹುಶಃ ಅಲ್ಲ ಪ್ರಾಯಶಃ ತೃತೀಯಲಿಂಗಿ ವರ್ಗದವರಿಗು ಒಂದು ನೆಮ್ಮದಿಯ ಜೀವನ ಲಭಿಸುತ್ತದೆ.

ಅವರು ಕೂಡ ‘ನಕ್ಷತ್ರ’ದಂತೆ ಮಿನುಗಲು ಅವಕಾಶ ಕೊಟ್ಟಂತೆಯೇ ಸರಿ.

ಡಾ. ನಕ್ಷತ್ರ ಅವರ ಉದ್ದೇಶಕ್ಕೆ ನೀವು ಹಣದ ಮೂಲಕ ಸಹಾಯ ನೀಡಲು ಇಚ್ಛಿಸಿದರೆ, ಕೆಳಗೆ ಕೊಟ್ಟಿರುವ ಲಿಂಕ್ ಕ್ಲಿಕ್ ಮಾಡಿ : https://milaap.org/fundraisers/support-nammane-summane

Source : The Better India

Exit mobile version