ಅದೃಷ್ಟ ಅಂದ್ರೆ ಇದೇ ನೋಡ್ರಿ ; ಕೊನೆ ಕ್ಷಣದಲ್ಲಿ ಕೋಟ್ಯಾಧಿಪತಿಯಾದ ಬಡ ವ್ಯಕ್ತಿ!

Lottery

ಸಾಲದ(Loan) ಸುಳಿಯಲ್ಲಿ ಸಿಲುಕಿ, ಹೊಸದಾಗಿ ನಿರ್ಮಿಸಿದ ಕನಸಿನ ಮನೆಯನ್ನೇ ಮಾರಲು ಹೊರಟ ವ್ಯಕ್ತಿಯೊಬ್ಬರಿಗೆ ಬರೋಬ್ಬರಿ ಒಂದು ಕೋಟಿ(Crore) ರೂಪಾಯಿ ಲಾಟರಿ ಹೊಡೆದಿದ್ದು, ಅದೃಷ್ಟ ಲಕ್ಷ್ಮಿಯೇ ಮನೆ ಬಾಗಿಲಿಗೆ ಬಂದು ಆ ಮನೆಯ ಸಂಕಷ್ಟಗಳನ್ನು ದೂರವಾಗಿಸಿದ್ದಾಳೆ! ಹೌದು, ಮಂಜೇಶ್ವರದ ಪಾವೂರು ನಿವಾಸಿ 50 ವರ್ಷದ ಮೊಹಮ್ಮದ್ ಬಾವ ಹಾಗೂ ಆತನ ಪತ್ನಿ 45 ವರ್ಷದ ಅಮೀನಾ, ಎಂಟು ತಿಂಗಳ ಹಿಂದೆ 2,000 ಚದರ ಅಡಿ ವಿಸ್ತೀರ್ಣದ ಮನೆಯನ್ನು ಬಹಳ ಆಸೆಯಿಂದ ನಿರ್ಮಿಸಿದ್ದರು.

ಈ ದಂಪತಿಗಳು ಮನೆ ಕಟ್ಟಲು ಬ್ಯಾಂಕ್ ನಿಂದ 10 ಲಕ್ಷ ರೂಪಾಯಿ ಸಾಲ ಮತ್ತು ಸಂಬಂಧಿಕರಿಂದ 20 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಇದಾದ ಕೆಲವೇ ದಿನಗಳಲ್ಲಿ, ತಮ್ಮ ಎರಡನೇ ಮಗಳ ಮದುವೆಗೆಂದು ಮತ್ತಷ್ಟು ಸಾಲ ಮಾಡುವ ಪರಿಸ್ಥಿತಿ ಎದುರಾಯಿತು. ಇದರಿಂದಾಗಿ ಮನೆ ನಿರ್ಮಿಸಲು ಮಾಡಿದ್ದ ಸಾಲವನ್ನು ತೀರಿಸಲು ಸಾಧ್ಯವಾಗದೇ, ಮನೆಯನ್ನೇ ಮಾರಾಟಕ್ಕಿಡಬೇಕಾದ ಪರಿಸ್ಥಿತಿ ಎದುರಾಯಿತು. ಈ ಬಗ್ಗೆ ಬಹಳ ಬೇಸರದಲ್ಲಿದ್ದ ದಂಪತಿಗಳ ಅದೃಷ್ಟವೆಂಬಂತೆ, ಮನೆಯ ಟೋಕನ್ ಹಣ ಸ್ವೀಕರಿಸುವ ಎರಡು ಗಂಟೆಗಳ ಮೊದಲು ಅವರಿಗೆ 1 ಕೋಟಿ ರೂಪಾಯಿಯ ಲಾಟರಿ ಬಹುಮಾನ ಬಂದಿದೆ.


ಈ ಬಗ್ಗೆ ಮಾತನಾಡಿರುವ ಮೊಹಮ್ಮದ್ ಬಾವ, “ನಾನು ನಮ್ಮ ಮನೆಯನ್ನು ಉಳಿಸುವಲ್ಲಿ ಯಶಸ್ವಿಯಾಗಿದ್ದೇನೆ. ಈಗಲೂ ನನಗೆ ಲಾಟರಿ(Lottery) ಹೊಡೆದಿದೆ ಎಂದು ನಂಬಲಾಗುತ್ತಿಲ್ಲ. ಭಾನುವಾರ ಸಂಜೆ 5 ಗಂಟೆಗೆ ನಮ್ಮ ಮನೆ ಖರೀದಿಸಲು ಟೋಕನ್ ಹಣ ನೀಡಲು ಬರುವುದಾಗಿ ವ್ಯಕ್ತಿಯೊಬ್ಬರು ಹೇಳಿದ್ದರು. ನಮಗೆ ನಾಲ್ವರು ಪುತ್ರಿಯರು, ಒಬ್ಬ ಪುತ್ರ ಇದ್ದಾನೆ. ಇಬ್ಬರು ಹಿರಿಯ ಹೆಣ್ಣು ಮಕ್ಕಳಿಗೆ ಮದುವೆಯಾಗಿದೆ. ನಮ್ಮ 22 ವರ್ಷದ ಮಗ ನಿಜಾಮುದ್ದೀನ್ ಮೂರು ವಾರಗಳ ಹಿಂದೆ ಕತಾರ್‌ನ(Qatar) ಎಲೆಕ್ಟ್ರಿಕಲ್ ಅಂಗಡಿಯಲ್ಲಿ ಸೇಲ್ಸ್‌ಮ್ಯಾನ್ ಆಗಿ ಕೆಲಸಕ್ಕೆ ಸೇರಿಕೊಂಡ.

ಇಬ್ಬರು ಕಿರಿಯ ಹೆಣ್ಣು ಮಕ್ಕಳು 12 ನೇ ತರಗತಿಯಲ್ಲಿ ಓದುತ್ತಿದ್ದಾರೆ. ಕಳೆದ ನಾಲ್ಕು ತಿಂಗಳಿನಿಂದ ನಾವೆಲ್ಲರೂ ತುಂಬಾ ಒತ್ತಡದಲ್ಲಿದ್ದೆವು. ಕಡಿಮೆ ಆದಾಯವಿದ್ದ ಕಾರಣ ಸಾಲ ತೀರಿಸಲು ಸಾಧ್ಯವಾಗಲಿಲ್ಲ ಎಂದರು. ಸುಮಾರು ನಾಲ್ಕು ತಿಂಗಳಿನಿಂದ ಕೇರಳ ಸರ್ಕಾರ(Kerala Government) ನಡೆಸುವ ಫಿಫ್ಟಿ-ಫಿಫ್ಟಿ ಲಾಟರಿ ಟಿಕೆಟ್‌ಗಳನ್ನು ಖರೀದಿಸುವ ಹವ್ಯಾಸವನ್ನು ಬಾವ ಬೆಳೆಸಿಕೊಂಡಿದ್ದರು. ಎಂದಾದರೂ ಒಂದು ದಿನ ಅದೃಷ್ಟವು ತನ್ನ ದುಃಖವನ್ನ ಕೊನೆಗೊಳಿಸುತ್ತದೆ ಎನ್ನುವ ಇವರ ನಿರೀಕ್ಷೆ ಸುಳ್ಳಾಗಲಿಲ್ಲ.

ಮನೆ ಮಾರುವ ಕೊನೆಯ ಸಂದರ್ಭದಲ್ಲಿ ಇವರಿಗೆ ಒಂದು ಕೋಟಿ ಜಾಕ್ ಪಾಟ್ ಹೊಡೆದಿದ್ದು, ಆದಾಯ ತೆರಿಗೆ ಕಡಿತವಾಗಿ ಸುಮಾರು 63 ಲಕ್ಷ ರೂ. ಬಾವ ಅವರ ಕೈಸೇರಲಿರುವ ಕಾರಣ, ತಮ್ಮ ಕನಸಿನ ಮನೆಯನ್ನು ಮಾರಾಟ ಮಾಡುವ ಅಗತ್ಯವಿಲ್ಲ ಎನ್ನುವುದು ಈ ಕುಟುಂಬ ಸದಸ್ಯರಲ್ಲಿ ಸಂತಸ ಮೂಡಿಸಿದೆ.

Exit mobile version