ವಿಜ್ಞಾನಕ್ಕೇ ಸವಾಲಾಗಿರುವ ಅಚ್ಚರಿಯ ತಾಣ ಹರಿಶ್ಚಂದ್ರಗಡ್!

Harishchandragad

ಇಡೀ ಜಗತ್ತನ್ನು ಸುತ್ತುವ ಆಸೆ ಯಾರಿಗೆ ತಾನೆ ಇರುವುದಿಲ್ಲ ಹೇಳಿ? ಪ್ರವಾಸ ಮಾಡುವ ಹಂಬಲವಿರುವವರಲ್ಲಿ ಅದೆಷ್ಟೋ ಜನ, ನಾವು ಜಗತ್ತಿನಲ್ಲಿರುವ ಸರಿಸುಮಾರು ಎಲ್ಲಾ ವಿಶಿಷ್ಟ ಸ್ಥಳಗಳಿಗೂ ಭೇಟಿ ನೀಡಿದ್ದೇವೆ ಎಂದು ಹೇಳಿಕೊಳ್ಳುತ್ತಾರೆ. ಆದರೆ ಅದೆಷ್ಟೊ ರಹಸ್ಯಮಯ ಸ್ಥಳಗಳು ಇನ್ನೂ ಆ ಭೂತಾಯಿಯ ಒಡಲಿನಲ್ಲಿ ಹುದುಗಿವೆ. ಹಲವು ಪ್ರದೇಶಗಳು ಜನರ ಗಮನಕ್ಕೆ ಬಂದಿರಬಹುದಾದರೂ ಇನ್ನೆಷ್ಟೋ ತಾಣಗಳು ಹಾಗೆಯೇ ಉಳಿದುಕೊಂಡಿರಬಹುದು. ಹೀಗೆ ಅನ್ವೇಷಿಸಲಾದ ಕೆಲವು ಸ್ಥಳಗಳು ಇಂದಿಗೂ ಒಂದು ರೀತಿಯ ರಹಸ್ಯಮಯ ತಾಣಗಳಾಗಿಯೆ ಉಳಿದು ಬಿಟ್ಟಿವೆ.

ಬೆರಳೆಣಿಕೆಯಷ್ಟು ಪ್ರವಾಸಿಗರು ಮಾತ್ರ ನಿರ್ದಿಷ್ಟ ಸಮಯದಲ್ಲಿ ಇಂತಹ ಸ್ಥಳಗಳಿಗೆ ಭೇಟಿ ನೀಡುತ್ತಾರೆ, ಅದೂ ಸಹ ಚಾರಣದ ಮೂಲಕ ಅನ್ನುವುದು ವಿಶೇಷ. ಅಂತಹ ಕೌತುಕಮಯ ಸ್ಥಳಗಳು ಭಾರತದಲ್ಲೂ ಸಹ ಹಲವು ಕಡೆಗಳಲ್ಲಿರುವುದನ್ನು ಕಾಣಬಹುದು. ಅಂತಹ ಸ್ಥಳಗಳಲ್ಲಿ ಒಂದು ಹರಿಶ್ಚಂದ್ರಗಡ್. ವಿಶೇಷವೆಂದರೆ ಬೆಟ್ಟ, ಕೋಟೆ ಹೊಂದಿರುವ ಈ ತಾಣವು ಇರುವುದೂ ಸಹ ಬೆಟ್ಟ ಕೋಟೆಗಳಿಗೆ ರಾಜಧಾನಿಯಂತಿರುವ ಮಹಾರಾಷ್ಟ್ರದಲ್ಲಿ. ಚಾರಣಿಗರ ಸ್ವರ್ಗವೆನಿಸಿರುವ ಮಹಾರಾಷ್ಟ್ರ ರಾಜ್ಯದ ಕೊಂಕಣ ಭಾಗದಲ್ಲಿ ಬರುವ ಈ ಸ್ಥಳ ಅಲೌಕಿಕ ಅನುಭೂತಿ ನೀಡುವ ಆಕರ್ಷಕ ಸ್ಥಳವಾಗಿದೆ.

ಸ್ಕಂದ ಪುರಾಣ ಹಾಗೂ ಮತ್ಸ್ಯ ಪುರಾಣಗಳಲ್ಲಿ ಕೂಡ ಈ ಅದ್ಭುತ ಸ್ಥಳದ ಕುರಿತು ಉಲ್ಲೇಖಿಸಿರುವುದನ್ನು ಗಮನಿಸಬಹುದು. ಐದು ಅಥವಾ ಆರನೇಯ ಶತಮಾನದ ಕಾಲಚೂರರ ಸಾಮ್ರಾಜ್ಯವು ಇಲ್ಲಿತ್ತು ಎಂಬುದು ಸಂಶೋಧನೆಗಳಿಂದ ತಿಳಿದು ಬಂದಿದೆ.
ಹರಿಶ್ಚಂದ್ರಗಡ್ ಮೂಲತಃ ಕೋಟೆ ತಾಣವಾಗಿದ್ದು, ಚಾರಣಿಗರು ಸಾಮಾನ್ಯವಾಗಿ ಇಲ್ಲಿಗೆ ಚಾರಣ ಮಾಡುತ್ತ ಬರುತ್ತಾರೆ. ಒಮ್ಮೆ ಈ ಕೋಟೆಯನ್ನು ತಲುಪಿದರೆ ಸಾಕು ಅಲ್ಲಿಂದ ವಿವಿಧ ಆಕರ್ಷಕ ಪೌರಾಣಿಕ ಹಿನ್ನೆಲೆಯ ಸ್ಥಳಗಳು ಒಂದೊಂದಾಗಿಯೆ ನಿಮ್ಮನ್ನು ಬರಮಾಡಿಕೊಳ್ಳಲು ಪ್ರಾರಂಭಿಸುತ್ತವೆ.


ಕೋಟೆಯ ಪೂರ್ವಕ್ಕೆ ಅದ್ಭುತವಾಗಿ ನಿರ್ಮಿಸಲಾದ ಕಲ್ಯಾಣಿಯೊಂದಿದೆ. ಅದನ್ನು ಸಪ್ತತೀರ್ಥ ಎಂದು ಕರೆಯುತ್ತಾರೆ. ದಶಕದ ಹಿಂದೆ ಇಲ್ಲಿನ ನೀರು ಸೇವಿಸಲು ಯೋಗ್ಯವಾಗಿತ್ತು. ಆದರೆ ಈ ಮಧ್ಯದಲ್ಲಿ ಇಲ್ಲಿಗೆ ಭೇಟಿ ನೀಡಿರುವ ಹಲವಾರು ಬೇಜವಾಬ್ದಾರಿ ಪ್ರವಾಸಿಗರ ಕೃತ್ಯಗಳಿಂದಾಗಿ ಈಗ ನೀರು ಸಾಕಷ್ಟು ಮಲೀನಗೊಂಡಿದೆ. ಸೇವಿಸುವುದು ಬಿಡಿ, ಈಜಲೂ ಸಹ ಯೋಗ್ಯವಾಗಿಲ್ಲದಂತಾಗಿದೆ. ಈ ಕಲ್ಯಾಣಿಯು ನಿಜಕ್ಕೂ ಒಂದು ವಿಸ್ಮಯವೆ ಸರಿ. ಏಕೆಂದರೆ ಇಲ್ಲಿನ ನೀರು ಎಷ್ಟೊಂದು ತಂಪಾಗಿದೆ ಎಂದರೆ, ಇದರ ಮುಂದೆ ಬಿರು ಬೇಸಿಗೆಯಲ್ಲಿ ನಿಂತರೂ ಕೂಡ ಮಂಜುಗಡ್ಡೆಯ ಮುಂದೆ ನಿಂತ ಅನುಭವವಾಗುತ್ತದಂತೆ!

ಹಾಗಾಗಿ ಈ ಕಲ್ಯಾಣಿಯಲ್ಲಿ ಇನ್ನು ಮುಂದಾದರೂ ಪ್ರವಾಸಿಗರು ಯಾವುದೆ ರೀತಿಯ ಕಸ, ಕಡ್ಡಿಯನ್ನು ಹಾಕದೆ ಸಂರಕ್ಷಿಸಿದರೆ ಬಲು ಉತ್ತಮ. ಇನ್ನು, ಕೋಟೆಯ ಪಶ್ಚಿಮಕ್ಕೆ ಮುಖ ಮಾಡಿರುವ ಕೊಂಕಣ ಕಡಾ ಶಿಖರ ಶೃಂಗವು ಅತ್ಯದ್ಭುತ ನೋಟವನ್ನು ಒದಗಿಸುವ ತಾಣವಾಗಿದ್ದು, ಮೈಮನವೆಲ್ಲ ರೋಮಾಂಚನಗೊಳ್ಳುವಂತೆ ಮಾಡುತ್ತದೆ. ಇಲ್ಲಿ ಒಂದು ನೈಸರ್ಗಿಕ ಚಮತ್ಕಾರವನ್ನು ನೋಡಬಹುದು. ಅದೆನೆಂದರೆ ಮೇಘ ಸ್ಫೋಟ. ಮೋಡಗಳು ಈ ಶಿಖರ ಶೃಂಗದ ಮಧ್ಯದ ಆಳವಾದ ಭಾಗದಲ್ಲಿ ಹಾದು ಹೋಗುವಾಗ ತಳಕ್ಕೆ ಆಕರ್ಷಿಸಲ್ಪಟ್ಟು ತಕ್ಷಣವೆ ಮೇಲಕ್ಕೆಸೆಯಲ್ಪಡುತ್ತವೆ.

ಇದರಿಂದ ಒಂದು ಗೋಡೆಯು ಆಕಾಶದಲ್ಲಿ ಹುಟ್ಟಿದೆಯೇನೊ ಅನ್ನುವಂತಿರುತ್ತದೆ. ಇಲ್ಲಿ ನಾಣ್ಯವನ್ನು ಎಸೆದರೆ ಅದು ಕೆಳಕ್ಕೆ ಬೀಳದೆ ಮೇಲ್ಮುಖವಾಗಿ ಚಲಿಸುವುದನ್ನು ನೋಡಬಹುದು.

Exit mobile version