ನನಗೆ ಇಬ್ಬರು ಗನ್‍ಮ್ಯಾನ್‍ಗಳನ್ನು ಕೊಡಿ : ನಟ ಚೇತನ್!

actor

ನನ್ನ ಜೀವಕ್ಕೆ ಅಪಾಯವಿದೆ. ಹೀಗಾಗಿ ರಾಜ್ಯ ಸರ್ಕಾರ ನನಗೆ ಇಬ್ಬರು ಗನ್‍ಮ್ಯಾನ್‍ಗಳನ್ನು ನೀಡಬೇಕು. ಈ ಕುರಿತು ರಾಜ್ಯ ಗೃಹ ಸಚಿವರಾದ ಅರಗ ಜ್ಞಾನೇಂದ್ರ ಅವರನ್ನು ಭೇಟಿಯಾಗಿ ಚರ್ಚಿಸಿದ್ದೇನೆ. ಗೃಹ ಸಚಿವರು ನನಗೆ ಗನ್‍ಮ್ಯಾನ್‍ಗಳನ್ನು ನೀಡುತ್ತಾರೆ ಎಂದುಕೊಂಡಿದ್ದೇನೆ ಎಂದು ನಟ ಮತ್ತು ಸಾಮಾಜಿಕ ಹೋರಾಟಗಾರ ಚೇತನ್ ಮಾದ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಕಳೆದ ಕೆಲ ದಿನಗಳಿಂದ ನನಗೆ ಹೆಚ್ಚು ಜೀವ ಬೆದರಿಕೆ ಕರೆಗಳು ಬರುತ್ತಿವೆ.

ಈ ಹಿಂದೆ ಗೌರಿ ಲಂಕೇಶ್ ಹತ್ಯೆಯಾದಾಗ ನಾನು ಸಕ್ರಿಯವಾಗಿ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದರ ಪರಿಣಾಮ, ನನಗೆ ಅನೇಕ ಜೀವ ಬೆದರಿಕೆ ಕರೆಗಳು ಬರ ತೊಡಗಿದ್ದವು. ಅಂದು ಪೋಲಿಸ್ ಇಲಾಖೆಯ ಸೂಚನೆಯ ಮೇರೆಗೆ, ಅಂದಿನ ಸರ್ಕಾರ ನನಗೆ ಒರ್ವ ಗನ್‍ಮ್ಯಾನ್‍ನನ್ನು ನೀಡಿತ್ತು. ಕಳೆದ ಕೆಲ ದಿನಗಳ ಹಿಂದೆ ಒಂದು ಕ್ಷುಲ್ಲಕ ಟ್ವೀಟ್‍ನಿಂದ ಪೋಲಿಸರು ನನ್ನನ್ನು ಬಂಧಿಸಿದ್ದರು. ಅಂದಿನಿಂದ ನನಗೆ ನೀಡಿದ್ದ ಗನ್‍ಮ್ಯಾನ್‍ನನ್ನು ರಾಜ್ಯ ಸಕಾರ ಹಿಂದಕ್ಕೆ ಪಡೆದಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ನನಗೆ ಒರ್ವ ಗನ್‍ಮ್ಯಾನ್‍ಗಿಂತ ಇಬ್ಬರು ಗನ್‍ಮ್ಯಾನ್‍ಗಳ ಅವಶ್ಯಕತೆ ಇದೆ.

ಇದನ್ನು ನಾನು ನನ್ನ ಹಿತದೃಷ್ಟಿಯಿಂದ ಕೇಳುತ್ತಿಲ್ಲ, ದೇಶದ ಹಿತದೃಷ್ಟಿಯಿಂದ ಇಬ್ಬರು ಗನ್‍ಮ್ಯಾನ್‍ಗಳನ್ನು ಕೇಳುತ್ತಿದ್ದೇನೆ ಎಂದು ನಟ ಚೇತನ್ ಹೇಳಿದ್ದಾರೆ. ಇನ್ನು ರಾಜ್ಯ ಗೃಹ ಸಚಿವರನ್ನು ಭೇಟಿಯಾದ ನಟ ಚೇತನ್ ಅವರು, ಗೃಹ ಸಚಿವ ಅರಗ ಜ್ಞಾನೇಂದ್ರ ಅವರೊಂದಿಗೆ ಕೆಲ ಕಾಲ ಚರ್ಚೆ ನಡೆಸಿದರು. ನಂತರ ಮಾದ್ಯಮಗಳೊಂದಿಗೆ ಮಾತನಾಡಿ, ನಾನು ಗೃಹ ಸಚಿವರೊಂದಿಗೆ ನನಗೆ ಭದ್ರತೆ ನೀಡುವುದರ ಕುರಿತು ಮಾತನಾಡಿದ್ದೇನೆ. ಅವರು ಕೂಡಾ ನನಗೆ ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದಾರೆ. ಗೃಹ ಸಚಿವರು ನನಗೆ ಭದ್ರತೆ ನೀಡುತ್ತಾರೆ ಎಂಬ ನಂಬಿಕೆ ನನಗಿದೆ ಎಂದು ನಟ ಚೇತನ ಹೇಳಿದ್ದಾರೆ.

Exit mobile version